ADVERTISEMENT

‘ಅಂಬೇಡ್ಕರ್ ಭವನದ ಎದುರೆ ವಿವೇಕ ಸ್ಮಾರಕ ಏಕೆ?’ – ಪುರುಷೋತ್ತಮ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 13:15 IST
Last Updated 24 ಜೂನ್ 2021, 13:15 IST
ಪುರುಷೋತ್ತಮ್
ಪುರುಷೋತ್ತಮ್   

ಮೈಸೂರು: ನಗರದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಎದುರೇ ವಿವೇಕ ಸ್ಮಾರಕ ನಿರ್ಮಾಣ ಆಗಬೇಕು ಎಂಬ ಹಟ ಏಕೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಪ್ರಶ್ನಿಸಿದರು.

‘ಬೇರೆ ಕಡೆ ದೊಡ್ಡದಾದ ಕಟ್ಟಡ ನಿರ್ಮಾಣ ಮಾಡಬಹುದಾದ ಸಾಧ್ಯತೆ ಇದ್ದರೂ, ಅಂಬೇಡ್ಕರ್ ಭವನದ ಎದುರಿನ ಎನ್‌ಟಿಎಂಎಸ್ ಶಾಲೆಯ ಜಾಗದಲ್ಲೆ ನಿರ್ಮಾಣ ಮಾಡಬೇಕು ಎಂಬ ಧೋರಣೆಯ ಹಿಂದೆ ಮನುವಾದಿಗಳು ಇದ್ದಿರಬಹುದು’ ಎಂದು ಅವರು ಸಂದೇಹವನ್ನು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿಗಳಲ್ಲಿ ಕೆಲವರು ಕನ್ನಡ ಶಾಲೆಯನ್ನು ಮುಚ್ಚಿ ವಿವೇಕ ಸ್ಮಾರಕ ನಿರ್ಮಿಸಲು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಇದು ಸಮಾಜಕ್ಕೆ ಕೆಟ್ಟ ಸಂದೇಶ ನೀಡಿದಂತಾಗಿದೆ. ಜತೆಗೆ, ಇದು ಅವರ ದುರ್ನಡತೆ ಎಂದು ಅವರು ಕಿಡಿಕಾರಿದರು.

ADVERTISEMENT

‘ನಾವು ಯಾವುದೇ ಕಾರಣಕ್ಕೂ ಸ್ವಾಮಿ ವಿವೇಕಾನಂದರು ಹಾಗೂ ರಾಮಕೃಷ್ಣ ಪರಮಹಂಸರ ವಿರೋಧಿಗಳು ಅಲ್ಲ‌. ಅವರ ಬಗ್ಗೆ ನಮಗೂ ಗೌರವ ಇದೆ. ಶಾಲೆಯೂ ಆಗಲಿ ಸ್ಮಾರಕವೂ ನಿರ್ಮಾಣ ಆಗಲಿ ಎಂಬುದು ನಮ್ಮ ವಾದ. ಒಂದು ವೇಳೆ ಶಾಲೆ ಕೆಡವಿ ಸ್ಮಾರಕ ನಿರ್ಮಿಸಿದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

ಅಂಬೇಡ್ಕರ್ ಭವನ ಪೂರ್ಣಗೊಳ್ಳಲು ಇನ್ನೂ ₹ 18 ಕೋಟಿ ಬೇಕಾಗುತ್ತದೆ. ಹಣಕಾಸು ಇಲಾಖೆ ಈ ಪ್ರಸ್ತಾವವನ್ನು ವಾಪಸ್ ಕಳುಹಿಸಿದೆ ಎಂಬ ಮಾಹಿತಿ ಇದೆ. ‘ಮುಡಾ’ ಅಧ್ಯಕ್ಷ ಎಚ್.ವಿ.ರಾಜೀವ್ ಈ ಕುರಿತು ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ದಲಿತ ಸಂಘಟನೆಗಳ ಒಕ್ಕೂಟದ ಸೋಸಲೆ ಸಿದ್ಧರಾಜು ಮಾತನಾಡಿ, ‘ಒಂದು ವೇಳೆ ಈಗ ಸ್ವಾಮಿ ವಿವೇಕಾನಂದರು ಬದುಕಿದ್ದರೆ ಅವರು ಶಾಲೆ ಕೆಡವಿ ಸ್ಮಾರಕ ನಿರ್ಮಿಸಿ ಎಂದು ಹೇಳುತ್ತಿರಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.