ಮೈಸೂರು: ಜಿಲ್ಲೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕಬಿನಿ ಹಿನ್ನೀರಿನ ಹಾಡಿ, ಗ್ರಾಮಗಳಲ್ಲಿ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟವನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ತಡೆಯುವಂತೆ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ರಾಷ್ಟ್ರೀಯ ಹುಲಿ ಸಂಕಕ್ಷಣಾ ಪ್ರಾಧಿಕಾರ(ಎನ್ಟಿಸಿಎ)ಕ್ಕೆ ಪತ್ರ ಬರೆದಿದ್ದಾರೆ.
‘ಪ್ರಜಾವಾಣಿ’ಯಲ್ಲಿ ಡಿ.15ರಂದು ಒಳನೋಟದಲ್ಲಿ ಪ್ರಕಟವಾಗಿದ್ದ ವರದಿ ‘ಕಬಿನಿಯಲ್ಲಿ ಮದ್ಯದ ‘ಹೊಳೆ’ ಹಾಗೂ 2014 ಜುಲೈ 1ರಂದು ಎನ್ಟಿಸಿಎ ನಡೆಸಿದ್ದ ಸ್ಥಳ ಪರಿಶೀಲನಾ ವರದಿ ಆಧರಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಎನ್ಟಿಸಿಎ ಜೊತೆಗೆ ರಾಜ್ಯ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ, ಹುಲಿ ಯೋಜನೆ ನಿರ್ದೇಶಕರಿಗೂ ಪತ್ರ ಬರೆದಿದ್ದಾರೆ.
‘ಕೇರಳ ಗಡಿಗೆ ಹೊಂದಿಕೊಂಡಿರುವ ಕಾಡಂಚಿನ ಗ್ರಾಮಗಳಲ್ಲಿ ಹಲವು ಬಾರ್ಗಳನ್ನು ತೆರೆಯಲು ಪರವಾನಗಿ ನೀಡಲಾಗಿದ್ದು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಬುಡಕಟ್ಟು ಜನರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎಂದು ಹೇಳಿದ್ದಾರೆ.
‘ಡಿ.ಬಿ.ಕುಪ್ಪೆ ಅರಣ್ಯ ವಲಯಕ್ಕೆ ಹೊಂದಿಕೊಂಡಿರುವ ಕಡೆಗದ್ದೆ ಗ್ರಾಮದಲ್ಲಿ ಹುಲಿಸಂರಕ್ಷಿತ ಪ್ರದೇಶದಲ್ಲಿಯೇ ಮದ್ಯದಂಗಡಿ ತೆರೆಯಲಾಗಿದ್ದು, ಈ ಬಗ್ಗೆ ಎನ್ಟಿಸಿಎ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವನ್ಯಜೀವಿಗಳಿಗೆ ತೊಂದರೆಯಾಗುತ್ತಿರುವ ಹಾಗೂ ಕಾನೂನು ಮತ್ತು ನಿಯಮ ಉಲ್ಲಂಘಿಸಿರುವ ಬಗ್ಗೆ 2014ರಲ್ಲೇ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದರು’ ಎಂದು ಉಲ್ಲೇಖಿಸಿದ್ದಾರೆ.
‘1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 33 (ಎ) ಪ್ರಕಾರ ಸರ್ಕಾರಿ ಲಾಡ್ಜ್ಗಳು ಸೇರಿದಂತೆ ಯಾವುದೇ ಪ್ರವಾಸಿ ಲಾಡ್ಜ್, ಹೋಟೆಲ್, ಮೃಗಾಲಯ ಮತ್ತು ಸಫಾರಿಗಳನ್ನು ಸಂರಕ್ಷಿತ ಪ್ರದೇಶದಲ್ಲಿ ರಾಷ್ಟ್ರೀಯ ಮಂಡಳಿ ಅನುಮತಿಯಿಲ್ಲದೆ ತೆರೆಯುವಂತಿಲ್ಲ. ಆದರೆ, ಡಿ.ಬಿ.ಕುಪ್ಪೆ ವಲಯದಲ್ಲಿ ಈ ನಿಯಮ ಉಲ್ಲಂಘಿಸಲಾಗಿದೆ’ ಎಂದಿದ್ದಾರೆ.
‘ಮದ್ಯದಂಗಡಿಗಳ ಪರವಾನಗಿ ರದ್ದುಗೊಳಿಸಿ, ಯಾವುದೇ ವಾಣಿಜ್ಯ ಚಟುವಟಿಕೆ ನಡೆಯದಂತೆ ಕ್ರಮ ವಹಿಸಲು ಅರಣ್ಯ ಇಲಾಖೆ, ಕಂದಾಯ, ಅಬಕಾರಿ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿಗೆ ಸೂಚಿಸಬೇಕು. ನಾಗರಹೊಳೆಯ ಜೀವ ವೈವಿಧ್ಯ ಹಾಗೂ ಬುಡಕಟ್ಟು ಜನರ ಜೀವನವನ್ನು ಉಳಿಸಬೇಕು’ ಎಂದು ಪ್ರಾಧಿಕಾರವನ್ನು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.