ADVERTISEMENT

ಬೆಳವಾಡಿಯಲ್ಲಿ ಮಹಿಳೆ ಕೊಲೆ: ಆರೋಪಿ ಬಂಧನ

ಬಿಟ್ಟು ಹೋಗುತ್ತೇನೆ ಎಂದಿದ್ದಕ್ಕೆ ಮನಸೋ ಇಚ್ಛೆ ಮಚ್ಚಿನಿಂದ ಹೊಡೆದ ಭೂಪ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 8:54 IST
Last Updated 16 ಏಪ್ರಿಲ್ 2021, 8:54 IST

ಮೈಸೂರು: ಬಿಟ್ಟು ಹೋಗುತ್ತೇನೆ ಎಂದಿದ್ದಕ್ಕೆ ತನ್ನ ಜತೆ ವಾಸಿಸುತ್ತಿದ್ದ ಪ್ರೀತಿಕುಮಾರಿ (25) ಎಂಬ ಮಹಿಳೆಯನ್ನು ಕಿರಣ್‌ (27) ಎಂಬಾತ ಮನಸೋಇಚ್ಛೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಳವಾಡಿಯಲ್ಲಿ ಗುರುವಾರ ಸಂಜೆ ನಡೆದಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಪ್ರೀತಿಕುಮಾರಿ ಪತಿಯನ್ನು ತೊರೆದಿದ್ದರು. ತನ್ನ ಮೂವರು ಮಕ್ಕಳೊಂದಿಗೆ ತನ್ನ ಅತ್ತೆಯ ಮಗ ಕಿರಣ್‌ ಜತೆ ಇಲ್ಲಿನ ಬೆಳವಾಡಿಯಲ್ಲಿ ಕಳೆದ 8 ತಿಂಗಳಿನಿಂದ ವಾಸವಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಕಿರಣ್‌ ಇವರಿಗೆ ವಿಪರೀತ ಕಿರುಕುಳ ಕೊಡುತ್ತಿದ್ದು, ಇಷ್ಟು ಹಿಂಸೆ ತಾಳಲಾಗುತ್ತಿಲ್ಲ. ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ಪ್ರೀತಿಕುಮಾರಿ ಹೇಳಿದ್ದಾರೆ. ಇದನ್ನು ಕೇಳಿ ಕೋಪಗೊಂಡ ಕಿರಣ್‌ ಮಚ್ಚಿನಿಂದ ತಲೆ, ಹೊಟ್ಟೆ ಹಾಗೂ ಕೈಗಳಿಗೆ ಹೊಡೆದಿದ್ದಾನೆ.

ರಕ್ತದ ಮಡುವಿನಲ್ಲಿ ಹೊರಳಾಡುತ್ತಿದ್ದ ಪ್ರೀತಿಕುಮಾರಿಯನ್ನು ಸಮೀಪದ ಆಸ್ಪತ್ರೆಗೆ ಅಕ್ಕಪಕ್ಕದವರು ದಾಖಲಿಸಿದರಾದರೂ, ಚಿಕಿತ್ಸೆಗೆ ಸ್ಪಂದಿಸದೇ ಇವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ವಿಷಯ ತಿಳಿಯುತ್ತಿದ್ದಂತೆ ಕಾರ್ಯೋನ್ಮುಖರಾದ ವಿಜಯನಗರ ಠಾಣೆ ಪೊಲೀಸರು ಆರೋಪಿ ಕಿರಣ್‌ನನ್ನು ಬಂಧಿಸಿದ್ದಾರೆ. ಪ್ರಕರಣ ವಿಜಯನಗರ ಠಾಣೆಯಲ್ಲಿ ದಾಖಲಾಗಿದೆ.

ಇಸ್ಕಾನ್ ದೇಗುಲದ ಎದುರು ಜೂಜಾಟ; 15 ಮಂದಿ ವಶಕ್ಕೆ

ಇಲ್ಲಿನ ಚಿನ್ನಗಿರಿ ಕೊಪ್ಪಲುವಿನ ಇಸ್ಕಾನ್ ದೇಗುಲದ ಎದುರು ಜೂಜಾಟದಲ್ಲಿ ತೊಡಗಿದ್ದ 15 ಮಂದಿಯನ್ನು ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪಣವಾಗಿ ಇರಿಸಿದ್ದ ₹ 79 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.