ಮೈಸೂರು: ‘ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾವುದೇ ಕಾರಣಕ್ಕೂ ಬದಲಿಸಬಾರದು’ ಎಂದು ಹುಣಸೂರು ತಾಲ್ಲೂಕಿನ ಗಾವಡಗೆರೆ ಮಠದ ನಟರಾಜ ಸ್ವಾಮೀಜಿ ಗುರುವಾರ ಇಲ್ಲಿ ಆಗ್ರಹಿಸಿದರು.
ನಗರದ ಹೊಸಮಠದಿಂದ ಮೈಸೂರು ಭಾಗದ 120ಕ್ಕೂ ಹೆಚ್ಚು ಮಠಾಧೀಶರೊಂದಿಗೆ ಬೆಂಗಳೂರಿಗೆ ತೆರಳುವ ಮುನ್ನ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಬಿಜೆಪಿ ಹೈಕಮಾಂಡ್ ವಿರುದ್ಧ ಗರಂ ಆದರು.
‘ವಿರೋಧ ಪಕ್ಷದವರು ಸಹ ಯಡಿಯೂರಪ್ಪಗೆ ಬೆಂಬಲ ಕೊಡುತ್ತಿದ್ದಾರೆ. ಇಂತಹ ಹೊತ್ತಲ್ಲಿ ಪಕ್ಷದೊಳಗೆ ಇರೋರೇ ಬಿಎಸ್ವೈ ಬದಲಿಸಲು ಮುಂದಾಗಿರೋದು ಒಳ್ಳೆಯ ಬೆಳವಣಿಗೆಯಲ್ಲ. ಪಕ್ಷದ ವರಿಷ್ಠರಿಗೆ ಎಲ್ಲವೂ ಗೊತ್ತಿದ್ದರೂ ಮೌನ ವಹಿಸಿರೋದು ಸರಿಯಲ್ಲ. ಮುಖ್ಯಮಂತ್ರಿಗೆ ಬೆಂಬಲ ಸೂಚಿಸಲಿಕ್ಕಾಗಿಯೇ ನಾವು ಬೆಂಗಳೂರಿಗೆ ಹೋಗುತ್ತಿದ್ದೇವೆ’ ಎಂದು ಅವರು ಹೇಳಿದರು.
‘ಅಧಿಕಾರ ಎಂಬುದು ಯಾರಿಗೂ ಶಾಶ್ವತ ಅಲ್ಲ. ಬಿಜೆಪಿ ತನ್ನ ಆಪದ್ಬಾಂಧವನನ್ನೇ ಹಠಕ್ಕೆ ಬಿದ್ದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸೋದು ಒಳ್ಳೆಯ ಬೆಳವಣಿಗೆಯಲ್ಲ. ಉಳಿದ ಅವಧಿಯನ್ನು ಯಡಿಯೂರಪ್ಪ ಪೂರೈಸಲಿ. ರಾಜಕಾರಣ ಹಳಿ ತಪ್ಪುತ್ತಿರೋದರಿಂದ ಮಠಾಧೀಶರು ಮಧ್ಯ ಪ್ರವೇಶಿಸಬೇಕಾಗಿದೆ’ ಎಂದು ನಟರಾಜ ಸ್ವಾಮೀಜಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.