ADVERTISEMENT

ಮೈಸೂರು | ಯುವ ಸಂಭ್ರಮಕ್ಕೆ ಅದ್ದೂರಿ ತೆರೆ: ಒಂಬತ್ತು ದಿನಗಳ ಕಾಲ ನಡೆದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 4:02 IST
Last Updated 19 ಸೆಪ್ಟೆಂಬರ್ 2025, 4:02 IST
ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆದ ಯುವ ಸಂಭ್ರಮದಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಅಳವಂದೂರಿನ ಸಿದ್ದಣ್ಣಶೆಟ್ಟರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆದ ಯುವ ಸಂಭ್ರಮದಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಅಳವಂದೂರಿನ ಸಿದ್ದಣ್ಣಶೆಟ್ಟರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.   

ಮೈಸೂರು: ಸಾವಿರಾರು ಕಲಾವಿದರಿಗೆ ವೇದಿಕೆ ಕಲ್ಪಿಸಿ, ಯುವ ಮನಸ್ಸುಗಳಿಗೆ ಮನರಂಜನೆಯ ರಸದೌತಣ ನೀಡಿದ ಯುವ ಸಂಭ್ರಮಕ್ಕೆ ಗುರುವಾರ ಅದ್ಧೂರಿ ತೆರೆ ಬಿದ್ದಿತು. ಕೊನೆಯ ದಿನವೂ ಬಯಲು ರಂಗಮಂದಿರ ಪ್ರೇಕ್ಷಕರಿಂದ ತುಂಬಿತ್ತು.

ಸಾಂಸ್ಕೃತಿಕ ಪರಂಪರೆ, ದೇಶಭಕ್ತಿ, ಅಂಬಾರಿ ಆನೆ ಕೃಷ್ಣ, ದಸರಾ ವೈಭವ, ಆರೋಗ್ಯ, ಜನಕೇಂದ್ರಿತ, ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾತ್ರ, ಪೌರಾಣಿಕ, ಭಾರತೀಯ ಯೋಧರ ಪಾತ್ರ, ಕೊಡವ ನೃತ್ಯ, ಕರ್ನಾಟಕ ಜಾನಪದವನ್ನು ವರ್ಣಿಸುವ 58 ತಂಡಗಳ ನೃತ್ಯ ‌ಪ್ರದರ್ಶನ ನಡೆಯಿತು. ಶ್ರೀರಂಗಪಟ್ಟಣದ ಡಿ ಪಾಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಅರ್ಜುನ ಆನೆ ಕುರಿತ ನೃತ್ಯ ರೂಪಕಕ್ಕೆ ಪ್ರೇಕ್ಷಕರು ಎದ್ದು ನಿಂತು ಗೌರವ ಸೂಚಿಸಿದರು.

ಬನುಮಯ್ಯ ಕಾಲೇಜಿನ ವಿದ್ಯಾರ್ಥಿಗಳು ಸಾಹಸ ಸಿಂಹ ವಿಷ್ಣುವರ್ಧನ್‌ ನಟಿಸಿದ ಚಲನಚಿತ್ರದ ಹಾಡುಗಳಿಗೆ ಹೆಜ್ಜೆಹಾಕಿದರು. ಗುಂಡ್ಲುಪೇಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಯೋಧ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ತ್ಯಾಗವನ್ನು ವರ್ಣಿಸಿದರು. ಎಚ್.ಡಿ.ಕೋಟೆಯ ಎಂಎಂಕೆ ಇಂಡಿಪೆಂಡೆಟ್ ಪಿಯು ಕಾಲೇಜು ವಿದ್ಯಾರ್ಥಿಗಳು ಕಾಳಿಕಾಂಬಾ ದೇವಿಯನ್ನು ಸ್ಮರಿಸಿದರು.

ADVERTISEMENT

ವಿರಾಜಪೇಟೆಯ ಸೇಂಟ್ ಎನಿಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಓನಕೆ ಓಬವ್ವ ಕುರಿತು, ಕೃಷ್ಣಮೂರ್ತಿಪುರಂನ ಶಾರದ ನೆಲೆ ವಿದ್ಯಾರ್ಥಿನಿಲಯದ ಮಕ್ಕಳು ಜಮ್ಮು ಕಾಶ್ಮೀರದ ಪೆಹಲ್ಗಾಮ್ ಘಟನೆ ಕುರಿತು ಪ್ರದರ್ಶಿಸಿದ ನೃತ್ಯರೂಪಕಕ್ಕೆ ಪ್ರೇಕ್ಷಕರ ಚಪ್ಪಾಳೆಯ ಗೌರವ ದೊರೆಯಿತು. 

ಜೆಎಸ್ಎಸ್ ಸ್ಕೂಲ್ ಆಫ್‌ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ‘ನಂದಾನಂದ ಮುಕುಂದ’, ‘ಕೈಯಲ್ಲಿ ಬಿಲ್ಲು ಹಿಡಿದೋನು ರಾಮ, ಗದೆಯನ್ನು ಹಿಡಿದಿರುವ ರಾಮ’, ‘ಗೋವಿಂದ ಗುರು ಹರಿ ಗೋಪಾಲ ರಾಧರಮಣ ಗೋಪಾಲ’ ಎಂದು ಕೃಷ್ಣನನ್ನು ಸ್ಮರಿಸಿದರು. ನೆಚ್ಚಿನ ಗೀತೆಗಳಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

ಕಿರುತರೆ ನಟ ರಾಜೇಶ್ ಧ್ರುವ ನಟಿಸಿದ ‘ಪೀಟರ್’ ಚಿತ್ರದ ಹಾಡನ್ನು ಪ್ರದರ್ಶಿಸಲಾಯಿತು, ಚಿತ್ರ ತಂಡಕ್ಕೆ ಶಾಸಕ ತನ್ವೀರ್ ಸೇಠ್ ಗೌರವ ಸಮರ್ಪಣೆ ಮಾಡಿದರು.

ಯುವ ಸಂಭ್ರಮದಲ್ಲಿ ಚಲನಚಿತ್ರ ಗೀತೆಗಳಿಗೆ ಯುವತಿಯರು ಸ್ಟೆಪ್‌ ಹಾಕಿದರು
9 ದಿನ 485 ತಂಡಗಳ ಪ್ರದರ್ಶನ
ಒಂಬತ್ತು ದಿನಗಳ ಯುವ ಸಂಭ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಸುಮಾರು 485 ತಂಡಗಳು ಪ್ರದರ್ಶನ ನೀಡಿದವು. ಕಾರ್ಯಕ್ರಮಕ್ಕೆ ಸಾರ್ವಜನಿಕರ ದಂಡೇ ಹರಿದು ಬಂದಿತ್ತು. ಸಂಜೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಬಯಲು ರಂಗಮಂದಿರದಲ್ಲಿ ಪ್ರೇಕ್ಷಕರು ತುಂಬಿಕೊಳ್ಳುತ್ತಿದ್ದರು. ಜನಸಮೂಹವನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಟ್ಟರು. ರಂಗಮಂದಿರದ ಮುಂಭಾಗ ಜನರು ಖಾಲಿಯಾದಂತೆ ಹೊರಗಿದ್ದ ಪ್ರೇಕ್ಷಕರನ್ನು ಒಳಗೆ ಬಿಡುತ್ತಿದ್ದರು. ಮಿತಿಗಿಂತ ಹೆಚ್ಚಿನ ಜನ ಬಂದಾಗಲೂ ಅವರನ್ನು ನಿಯಂತ್ರಿಸಿದ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.