ADVERTISEMENT

‘ಪ್ರತಿಯೊಬ್ಬರಿಗೂ ಆಹಾರದ ಹಕ್ಕು ಸಿಗಲಿ’

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಕುರಿತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 15:31 IST
Last Updated 19 ಆಗಸ್ಟ್ 2019, 15:31 IST
ಸಭೆಯಲ್ಲಿ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್.ಕೃಷ್ಣಮೂರ್ತಿ,ಜಿಲ್ಲಾಧಿಕಾರಿ ಸಿ.ಎಸ್. ಕರೀಗೌಡ ಇದ್ದರು 
ಸಭೆಯಲ್ಲಿ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್.ಕೃಷ್ಣಮೂರ್ತಿ,ಜಿಲ್ಲಾಧಿಕಾರಿ ಸಿ.ಎಸ್. ಕರೀಗೌಡ ಇದ್ದರು    

ದೇವನಹಳ್ಳಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅನುಷ್ಠಾನದಿಂದಾಗಿ ಸಮಾಜದ ಪ್ರತಿಯೊಬ್ಬರು ಆಹಾರದ ಹಕ್ಕು ಪಡೆದಿದ್ದಾರೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್.ಕೃಷ್ಣಮೂರ್ತಿ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಕುರಿತು ನಡೆದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕಾಯ್ದೆ ಅನ್ವಯ ಅಹಾರ ಇಲಾಖೆಗೆ ಹೆಚ್ಚಿನ ಜವಾಬ್ದಾರಿ ಇದೆ. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡಿತರಿಗೆ 7ಕೆ.ಜಿ ಅಕ್ಕಿ ಉಚಿತ, 1 ಕೆ.ಜಿ ಬೆಳೆಗೆ ಮಾತ್ರ ₹38ರೂಪಾಯಿ ನಿಗದಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಹೆಚ್ಚುವರಿ ಹಣ ಪಡೆಯಲು ಅವಕಾಶ ಇಲ್ಲ. ಹಳೆ ಪದಾರ್ಥ ಖರೀದಿಸುವಂತಿಲ್ಲ. ಅಂತಹ ಬೆಳವಣಿಗೆ ಕಂಡು ಬಂದರೆ ನ್ಯಾಯಬೆಲೆ ಅಂಗಡಿ ಮಾಲೀಕರ ಹೆಸರು ಮತ್ತು ನೋಂದಣಿ ಸಂಖ್ಯೆ ಅಯೋಗದ ಗಮನಕ್ಕೆ ತಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಹೇಳಿದರು.

ADVERTISEMENT

ದೇವನಹಳ್ಳಿ ಮರಳು ಬಾಗಿಲು ಮತ್ತು ದೊಡ್ಡಬಳ್ಳಾಪುರ ಶಾಂತಿನಗರದ ಅಂಗನವಾಡಿ ಕೇಂದ್ರಗಳಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ದಿನವಹಿ ದಾಖಲೆ, ದಾಸ್ತಾನು ಬಗ್ಗೆ ಲೆಕ್ಕ ನಿರ್ವಹಣೆ ಮಾಡಿಲ್ಲ. ಸಿಡಿಪಿಒ ಅಶ್ವತ್ಥಮ್ಮ ಅವರ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಬೇರೆಡೆ ವರ್ಗಾವಣೆ ಮಾಡಲಾಗಿದೆ. ದೇವನಹಳ್ಳಿ ಬೆಟ್ಟಕೋಟೆ ರಾಮಕೃಷ್ಣ ಗ್ರಾಮಾಂತರ ಶಾಲೆ, ಸೂಲಿಬೆಲೆ ಸ್ವಾಮಿ ವಿವೇಕಾನಂದ ಅನುದಾನಿತ ಪ್ರೌಢಶಾಲೆ ಮತ್ತು ಸೂಲಿಬೆಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟಕ್ಕೆ 40ಕೆ.ಜಿ ಲೆಕ್ಕ ತೋರಿಸಿ 25 ಕೆ.ಜಿ ಬಳಕೆ ಮಾಡಲಾಗಿದೆ. 1ರಿಂದ 7ನೇ ತರಗತಿವರೆಗೆ ಪ್ರತಿ ಮಕ್ಕಳಿಗೆ 100 ಗ್ರಾಂ ಅಕ್ಕಿ, 8ರಿಂದ10 ನೇ ತರಗತಿವರೆಗೆ 150ಗ್ರಾಂ ಅಕ್ಕಿ ಕಡ್ಡಾಯ ಎಂದು ತಿಳಿದಿದ್ದರೂ ಕೆಲ ಶಾಲೆಗಳಲ್ಲಿ ಅವ್ಯವಹಾರ ನಡೆದಿದೆ. ಇದನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಅಂಗನವಾಡಿ ಮತ್ತು ಸರ್ಕಾರಿ ಶಾಲೆ ಮಕ್ಕಳ ಆರೋಗ್ಯ ತಪಾಸಣೆ ನಡೆದಿಲ್ಲ. ಎರಡು ತಿಂಗಳಿಗೊಮ್ಮೆ ಸರ್ಕಾರಿ ವೈದ್ಯರು ಆರೋಗ್ಯ ತಪಾಸಣೆ ನಡೆಸಬೇಕು. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಆಯೋಗದ ಸದಸ್ಯರಾದ ಮಂಜುಳಾ ಬಾಯಿ, ಸುಜಾತ, ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ನಾಯ್ಕ, ಆಹಾರ ಇಲಾಖೆ ನಿರ್ದೇಶಕ ಸಿದ್ಧಾರ್ಥ ಹೊಸಮನಿ, ಸಿಇಒ ಆರ್.ಲತಾ,ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.