ADVERTISEMENT

ಅಂಗಡಿ ಮೇಲೆ ದಾಳಿ: ಅಕ್ರಮ ಸಿಲಿಂಡರ್‌ವಶ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 6:25 IST
Last Updated 11 ಫೆಬ್ರುವರಿ 2012, 6:25 IST

ಲಿಂಗಸುಗೂರ: ಪಟ್ಟಣದ ಡಾಬಾ, ಹೊಟೆಲ್, ಖಾನಾವಳಿ ಸೇರಿದಂತೆ ವ್ಯಾಪಾರದ ಅಂಗಡಿಗಳ ಮೇಲೆ ಶುಕ್ರವಾರ ಬೆಳಿಗ್ಗೆ ಸಹಾಯಕ ಆಯುಕ್ತ ಟಿ. ಯೊಗೇಶ ಅವರ ಮಾರ್ಗದರ್ಶನದಲ್ಲಿ ತಹಸೀಲ್ದಾರ ಜಿ. ಮುನಿರಾಜಪ್ಪ ಅವರ ಸಾರಥ್ಯದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ 30 ಅಂಗಡಿಗಳಲ್ಲಿ 30ಕ್ಕೂ ಹೆಚ್ಚು ಅಕ್ರಮ ಸಿಲಿಂಡರ್ ಬಳಕೆ ಪತ್ತೆ ಹಚ್ಚಿ ಜಪ್ತಿ ಮಾಡಿಕೊಂಡ ಘಟನೆ ವರದಿಯಾಗಿದೆ.

ಕಳೆದ ಹಲವಾರು ತಿಂಗಳುಗಳಿಂದ ಗೃಹ ಬಳಕೆ ಸಿಲಿಂಡರ್‌ಗಳನ್ನು ವ್ಯಾಪಾರದ ಉದ್ದೇಶಕ್ಕೆ ಹಾಗೂ ವಾಹನಗಳಿಗೆ ಬಳಕೆ ಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿಬಂದಿದ್ದವು.
 
ಅಂತೆಯೆ ಇಂದು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದಾಗ ಗೃಹಬಳಕೆ ಸಿಲಿಂಡರ್ ದುರ್ಬಳಕೆ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿರುವುದು ಬಹಿರಂಗಗೊಂಡಿದೆ ಎಂದು ಟಿ. ಯೊಗೇಶ ಮಾಹಿತಿ ನೀಡಿದರು.

ಲಿಕ್ವಿಫೈಡ್ ಪೆಟ್ರೋಲಿಯಮ್ ಗ್ಯಾಸ್ ಆರ್ಡರ-2000ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ. ಇಸಿ ಆ್ಯಕ್ಟ್-1955ರಲ್ಲಿ ಅಕ್ರಮ ಸಿಲಿಂಡರ್ ಬಳಕೆ ಮಾಡಿದ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ನೀಡಿ ಸಿಲೆಂಡರ್ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಅಕ್ರಮ ಬಳಕೆದಾರರ ವಿರುದ್ಧ ಕಠಿಣ ಕ್ರಮ ಕೂಡ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ದಾಳಿಯಲ್ಲಿ ಆಹಾರ ಶಿರಸ್ತೆದಾರ ಅಣ್ಣಪ್ಪ, ಆಹಾರ ನಿರೀಕ್ಷಕ ಕೆ.ಬಿ. ಕುಲಕರ್ಣಿ, ಕಂದಾಯ ನಿರೀಕ್ಷಕ ತುಳುಜಾರಾಮ್‌ಸಿಂಗ್, ಗ್ರಾಮ ಲೆಕ್ಕಾಧಿಕಾರಿ ಬಾಬು, ಗ್ಯಾಸ್ ಕಂಪೆನಿ ಮಾಲೀಕ ಶ್ರೀನಿವಾಸ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.