ಲಿಂಗಸುಗೂರು: ಜಿಲ್ಲೆಯಾದ್ಯಂತ ಹೊಸ ಮರಳು ನೀತಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಗುತ್ತಿಗೆದಾರರು, ವಿವಿಧ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಅಕ್ರಮ ಮರಳು ಮಾಫಿಯಾ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ದೇವದುರ್ಗ ಮರಳು ಸಂಗ್ರಹಣಾ ಕೇಂದ್ರದಿಂದ ಜಿಲ್ಲೆಯ ಜನರಿಗೆ ಅವಶ್ಯಕತೆಗೆ ತಕ್ಕಷ್ಟು ಮರಳು ಸಿಗುತ್ತಿಲ್ಲ. ಪ್ರತಿನಿಧಿಗಳ ಹೆಸರು ಹೇಳಿಕೊಂಡು ರಾಜಸ್ವಧನ ಪಾವತಿಸದೆ ಹುಬ್ಬಳ್ಳಿ, ಹೈದರಾಬಾದ್, ಬೆಳಗಾವಿ, ಬಳ್ಳಾರಿ ಇತರೆ ನಗರ ಪ್ರದೇಶಕ್ಕೆ ಅಕ್ರಮ ಮರಳು ಸಾಗಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಕ್ರಮ ಮರಳು ಸಾಗಣೆ ತಡೆಯುವಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದ ಸಮಿತಿಗಳು ಸಂಪೂರ್ಣ ವಿಫಲವಾಗಿವೆ. ಜಿಲ್ಲೆಯಿಂದ ಹೊರ ಜಿಲ್ಲೆಗೆ ಸಾಗಣೆ ಆಗುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ಜಿಲ್ಲಾ ಮತ್ತು ತಾಲ್ಲೂಕು ಗಡಿ ಭಾಗದಲ್ಲಿ ತಪಾಸಣೆ ಕೇಂದ್ರಗಳನ್ನು ತೆರೆಯಬೇಕು. ಈ ಮುಂಚಿನ ಹೊಸ ಮರಳು ನೀತಿಯನ್ನು ಕಡ್ಡಾಯ ಪಾಲನೆಗೆ ಆದೇಶಿಸಬೇಕು, ತಾಲ್ಲೂಕು ಕೇಂದ್ರಗಳಲ್ಲಿ ಮರಳು ಬ್ಲಾಕ್ ಗುರುತಿಸಬೇಕು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರವಾನಿಗೆ ನೀಡುವಲ್ಲಿ ನಡೆಸುತ್ತಿರುವ ಅಕ್ರಮದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಕರವೇ ತಾಲ್ಲೂಕು ಅಧ್ಯಕ್ಷ ಜಿಲಾನಿಪಾಷ, ಮುಖಂಡರಾದ ಶಿವರಾಜ ನಾಯಕ, ಅಮರೇಶ ನಾಯಕ, ಅಜೀಜಪಾಷ, ರವಿಕುಮಾರ ಬರಗುಡಿ, ಎಂ.ಜಿಲಾನಿ, ಚಂದ್ರು ನಾಯಕ, ಮೊಹ್ಮದ ಅರೀಫ್, ಹನುಮಂತ ನಾಯಕ, ಮೌನೇಶ ಭೋವಿ, ಸಲ್ಮಾನ್ಖಾನ, ಮಂಜುನಾಥ ರಾಠೋಡ, ಮಾರುತಿ ಮುಂಡೆವಾಡಿ, ಮಂಜುನಾಥ, ಯಮನೂರ, ಆದಿಲ್, ಪ್ರಭು ಕಾಳಾಪುರ, ಅಲ್ಲಾವುದ್ದೀನ್ಬಾಬ, ಯಾಸೀನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.