ಲಿಂಗಸುಗೂರು: ‘ಜನರು ಮದುವೆಗೆ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕುತ್ತಿರುವ ಇಂದಿನ ಸಂದರ್ಭದಲ್ಲಿ ಶಾಸಕ ಮಾನಪ್ಪ ವಜ್ಜಲ ಅವರು ತಮ್ಮ ಮಕ್ಕಳ ಮದುವೆ ನೆಪದಲ್ಲಿ ಸಾಮೂಹಿಕ ವಿವಾಹ ಆಯೋಜಿಸಿರುವುದು ಉತ್ತಮ ಕೆಲಸ. ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.
ಮಾನಪ್ಪ, ನಾಗಪ್ಪ, ಕರಿಯಪ್ಪ ವಜ್ಜಲ (ಎಂ.ಎನ್.ಕೆ) ಸಂಘದಿಂದ ಭಾನುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ವಜ್ಜಲ ಕುಟುಂಬದವರು ಕ್ಷೇತ್ರದ ಅಭಿವೃದ್ಧಿ ಜೊತೆಗೆ ಜನ ಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುತ್ತಿರುವುದು ಖುಷಿ ತಂದಿದೆ. ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳ ಬದುಕು ಸುಂದರವಾಗಲಿ’ ಎಂದು ಹಾರೈಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರು ವಧು ವರರಿಗೆ ಅಕ್ಷತೆ ಹಾಕು ಶುಭ ಕೋರಿದರು. ಶಾಸಕ ಮಾನಪ್ಪ ವಜ್ಜಲ ಅವರ ಪುತ್ರ ಶ್ರೀಮಂತರಾಯ, ಅವರ ಸಹೋದರಿಯರ ಪುತ್ರರಾದ ಅಂಬೃತ್, ಹನುಮಂತರಾಯ, ಪುತ್ರಿ ಪಾರ್ವತಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
200 ಜೋಡಿ ಮದುವೆ: ಶಾಸಕ ಮಾನಪ್ಪ ವಜ್ಜಲ ಕುಟುಂಬದವರ ಮದುವೆ ಸಮಾರಂಭದಲ್ಲಿ ಆಯೋಜಿಸಿದ್ದ ಸರ್ವ ಧರ್ಮಗಳ ಸಾಮೂಹಿಕ ವಿವಾಹದಲ್ಲಿ 200ಕ್ಕೂ ಜೋಡಿಗಳು ಹಸೆಮಣೆ ಏರಿದವು.
ಬಾಗಲಕೋಟೆಯ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಜಾಲಹಳ್ಳಿಯ ಶಾಂತಲಿಂಗ ಶಿವಾಚಾರ್ಯರು, ಇರಕಲ್ಲಿನ ಬಸವಪ್ರಭು ಸ್ವಾಮೀಜಿ, ಗುರುಗುಂಟಾದ ಚರಮೂರ್ತೇಶ್ವರ ಸ್ವಾಮೀಜಿ, ಗೋಲಪಲ್ಲಿ ಶ್ರೀಗಳು, ಸಂಸದ ಸಂಗಣ್ಣ ಕರಡಿ, ಶಾಸಕರಾದ ಸತೀಶ ಜಾರಕಿಹೊಳಿ, ಶಿವರಾಜ ಪಾಟೀಲ, ದೊಡ್ಡನಗೌಡ ಪಾಟೀಲ, ಪ್ರತಾಪಗೌಡ ಪಾಟೀಲ, ಎ.ಎಸ್. ನಡಹಳ್ಳಿ, ಮಾಜಿ ಸಚಿವರಾದ ಅಮರೇಶ್ವರ ನಾಯಕ, ರಾಜೂಗೌಡ, ಅರವಿಂದ ಲಿಂಬಾವಳಿ, ಮುಖಂಡರಾದ ವೆಂಕಟರಾವ್ ನಾಡಗೌಡ್ರ ರಾಜಾ ಶ್ರೀನಿವಾಸ ನಾಯಕ, ರಾಜಾ ಸೋಮನಾಥ ನಾಯಕ, ಬಸನಗೌಡ ಬ್ಯಾಗವಾಟ, ತ್ರಿವಿಕ್ರಮ ಜೋಷಿ, ಸಿದ್ದು ಬಂಡಿ, ಮಹಾದೇವಪ್ಪಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.