ADVERTISEMENT

ಉಪನಿರ್ದೇಶಕರಿಗೆ ವಿದ್ಯಾರ್ಥಿಗಳ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 6:32 IST
Last Updated 25 ಸೆಪ್ಟೆಂಬರ್ 2013, 6:32 IST

ಕವಿತಾಳ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿದ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಸ್ಥಳಕ್ಕೆ ಆಗಮಿಸಿದ ಕಾಲೇಜು ಶಿಕ್ಷಣ ಪ್ರಭಾರ ಉಪನಿರ್ದೇಶಕ ಎಸ್‌.ಎಸ್‌.­ಹಿರೇಮಠ ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪಿಯುಸಿಯಲ್ಲಿ ವಾಣಿಜ್ಯ, ವಿಜ್ಞಾನ ವಿಭಾಗ ಮತ್ತು ಪದವಿ ಕಾಲೇಜು ಆರಂಭಿಸಬೇಕು, ಕಟ್ಟಡ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ಮತ್ತು ಆರ್‌ವೈಎಫ್‌ಐ ಬೆಂಬಲ­ದೊಂದಿಗೆ ವಿದ್ಯಾರ್ಥಿಗಳು ಪ್ರತಿಭಟನೆ ಹಮ್ಮಿಕೊಂಡರೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಕೆಲವೇ ವರ್ಷಗಳ ಹಿಂದೆ ನಿರ್ಮಿಸಿದ ಪಿಯು ಕಾಲೇಜು ಕಟ್ಟಡ ಸೋರುತ್ತಿದ್ದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕಟ್ಟಡವನ್ನು ಇದುವರೆಗೂ ಇಲಾಕೆ ವಹಿಸಿಕೊಂಡಿಲ್ಲ ಹೀಗಾಗಿ ಕಾಮಗಾರಿ ನಿರ್ವಹಿಸಿದ ಲೊಕೋಪಯೋಗಿ ಇಲಾ­ಖೆಗೆ ಪತ್ರ ಬರೆದು ಕ್ರಮ ಕೈಗೊಳ್ಳು­ವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ವಾಣಿಜ್ಯ, ವಿಜ್ಞಾನ ವಿಭಾಗ ಮತ್ತು ಪದವಿ ಕಾಲೇಜು ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾ­ಗುವುದು, ಶೌಚಾಲಯ ನಿರ್ಮಾಣ ಮಾಡಲು ಅನುದಾನದ ಬಗ್ಗೆ ಶಾಸಕ­ರೊಂದಿಗೆ ಚರ್ಚಿಸಲಾಗುವುದು ಮತ್ತು ವಿದೇಶದಲ್ಲಿರುವ ಇಂಗ್ಲೀಷ್‌ ಉಪನ್ಯಾಸಕಿ ವಿರುದ್ದ ಕ್ರಮ ಕೈಗೊಳ್ಳು­ವುದಾಗಿ ತಿಳಿಸಿದರು.

ಉಪ ತಹಸೀಲ್ದಾರ ಮೋಹನ್‌, ಸಬ್‌ ಇನ್ಸ್‌ಪೆಕ್ಟರ್‌ ರವಿ ಉಕ್ಕುಂದ ಇದ್ದರು. ಸಂಘಟನೆಯ ಸಣ್ಣಯ್ಯ ಹಿರೇಮಠ, ರಂಗನಾಥ, ಬಸವರಾಜ ಕವಿತಾಳ, ಮೇಷಕ್‌ ಡಿ ಸಿರವಾರ, ರಮೇಶ, ರುಕ್ಮುದ್ದೀನ್‌, ರಫಿ, ಬಸವರಾಜ ಹಿಂದಿನಮನಿ ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.