ರಾಯಚೂರು: ಮಾವಿನ ಕೆರೆ ಮೇಲಿರುವ ವಾಯು ವಿಹಾರ ಪಥದಲ್ಲಿ ವಿದ್ಯುತ್ ಕಂಬಗಳಿವೆ. ಆದರೆ, ವಿದ್ಯುತ್ ದೀಪಗಳು ಇಲ್ಲದಿರುವುದರಿಂದ ನಾಗರಿಕರು ವಾಯು ವಿಹಾರಕ್ಕೆ ಹೋಗಲು ಹಿಂಜರಿಯುವಂತೆ ಮಾಡಿದೆ.
ನಗರದ ಹೃದಯಭಾಗದಲ್ಲಿರುವ ಮಾವಿನಕೆರೆ ಆಕರ್ಷಣೀಯ ಸ್ಥಳವಾಗಿದ್ದು, ಕೆರೆಯ ಪಕ್ಕದಲ್ಲಿ ಅಭಿವೃದ್ಧಿ ಪಡಿಸಿರುವ ಉದ್ಯಾನದಲ್ಲಿ ನಿತ್ಯವೂ ಸಂಜೆ, ಬೆಳಿಗ್ಗೆ ಜನರು ವಾಯುವಿಹಾರಕ್ಕೆ ಬರುತ್ತಾರೆ. ವಾರಾಂತ್ಯ ಮತ್ತು ರಜೆ ದಿನಗಳಲ್ಲಿ ಜನದಟ್ಟಣೆ ಇರುತ್ತದೆ. ಸಂಜೆ ಹಾಗೂ ನಸುಕಿನಲ್ಲಿ ಕತ್ತಲು ಇರುತ್ತದೆ. ವಿದ್ಯುತ್ ದೀಪ ಇಲ್ಲದ ಕಾರಣ ಜನರು ಭೀತಿಯಲ್ಲಿ ವಾಯುವಿಹಾರ ಮಾಡುವಂತಾಗಿದೆ.
ವಾಯು ವಿಹಾರದ ಪಥದಲ್ಲಿ ಅಲ್ಲಲ್ಲಿ ಕುಳಿತುಕೊಳ್ಳಲು ಬೆಂಚ್ಗಳನ್ನು ಅಳವಡಿಸಲಾಗಿದೆ. ಕತ್ತಲು ಆವರಿಸುತ್ತಿದಂತೆ ಈ ಬೆಂಚ್ಗಳಲ್ಲಿ ಪಡ್ಡೆ ಹುಡುಗರು ಕುಳಿತುಕೊಂಡಿರುತ್ತಾರೆ. ಇದರಿಂದ ವಾಯು ವಿಹಾರಿಗಳಿಗೆ ಸಮಸ್ಯೆ ಆಗುತ್ತಿದೆ. ಗಾರ್ಡನ್ನಲ್ಲಿ ದೊಡ್ಡದಾದ ವಿದ್ಯುತ್ ದೀಪಗಳನ್ನು ಹಾಕಲಾಗಿದೆ. ಆದರೆ, ಈ ವಿದ್ಯುತ್ ದೀಪಗಳ ಬೆಳಕು ವಾಯು ವಿಹಾರದ ಪಥಕ್ಕೆ ಬೆಳಕು ಸೂಸುವುದಿಲ್ಲ.
ಅದರಲ್ಲೂ ಈಗ ಬೇಸಿಗೆಯ ಸಮಯವಾಗಿದ್ದರಿಂದ ಸಂಜೆಯ ಹೊತ್ತಲ್ಲಿ ತಂಪಾದ ಗಾಳಿ ಆಸ್ವಾದಿಸಲು ಜನರು ಬರುತ್ತಾರೆ. ಆದರೆ, ನಗರಸಭೆಯ ನಿರ್ವಹಣೆಯ ವೈಫಲ್ಯದಿಂದ ನಗರದಲ್ಲಿ ಇರುವ ಏಕೈಕ ಕೆರೆಯೂ ಹಾಳಾಗಿದೆ.
ಕೆರೆಯಲ್ಲಿ ಕಲುಷಿತ ನೀರು ತುಂಬಿಕೊಂಡು ಸುತ್ತಮುತ್ತಲಿನ ವಾತಾವರಣವನ್ನು ಮಲೀನಗೊಂಡಿದೆ. ನಗರದಲ್ಲಿ ಪರ್ಯಾಯ ಸ್ಥಳಗಳು ಇಲ್ಲದಿರುವುದರಿಂದ ಮಲೀನಗೊಂಡಿರುವ ಕೆರೆಯ ಸುತ್ತಲಿನ ಪರಿಸರದಲ್ಲಿ ವಾಯು ವಿಹಾರ ಮಾಡುವುದು ಜನರಿಗೆ ಅನಿವಾರ್ಯವಾಗಿದೆ.
ವಾಯು ವಿಹಾರದ ಪಥದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಿ, ಸ್ವಚ್ಛತೆಯನ್ನು ಕಾಪಾಡುವ ಮೂಲಕ ನಗರಸಭೆ ನಾಗರಿಕರಿಗೆ ಸೌಕರ್ಯಗಳನ್ನು ಒದಗಿಸಬೇಕು. ಬೀಟ್ ಪೊಲೀಸರನ್ನು ನೇಮಿಸುವ ಮೂಲಕ ಜನರಿಗೆ ರಕ್ಷಣೆ ನೀಡಬೇಕು ಎಂದು ವಾಯು ವಿಹಾರಿಗಳ ಒತ್ತಾಯವಾಗಿದೆ.
**
ವಾಯು ವಿಹಾರಿಗಳಿಗೆ ಅನುಕೂಲವಾಗಲು ವಿದ್ಯುತ್ ವ್ಯವಸ್ಥೆ ಮಾಡಿಸಿ, ಸ್ವಚ್ಛತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗುವುದು – ರಮೇಶ ನಾಯಕ, ಪೌರಾಯುಕ್ತ.
**
ಪಿ.ಹನುಮಂತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.