ADVERTISEMENT

ಎಂಇಎಸ್ ಶಾಸಕರ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 7:11 IST
Last Updated 13 ಡಿಸೆಂಬರ್ 2013, 7:11 IST

ಮಾನ್ವಿ: ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಎಂಇಎಸ್‌ ಶಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಪದಾಧಿಕಾರಿಗಳು ಗುರುವಾರ ಪಟ್ಟಣ­ದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬೆಳಿಗ್ಗೆ ಪಟ್ಟಣದ ಬಸವ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ಮೌನ ಮೆರವಣಿಗೆಯಲ್ಲಿ ತೆರಳಿದ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ನಂತರ ತಹಶೀಲ್ದಾರ್‌ ಎಂ.ಐ.ಶಹನೂರು ಅವರಿಗೆ ಮನವಿ ಸಲ್ಲಿಸಿದರು. ಮಹಾರಾಷ್ಟ್ರ ಏಕೀಕರಣ ಸಮಿತಿ ಶಾಸಕರಾದ ಸಂಭಾಜೀ ಪಾಟೀಲ್‌ ಹಾಗೂ ಅರವಿಂದ ಅವರು, ಕರ್ನಾಟಕ ಹಾಗೂ ಕನ್ನಡಿಗರ ವಿರುದ್ಧ ಉದ್ಧಟ­ತನದ ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಒಡಕು ಉಂಟು­ಮಾಡಲು ಪ್ರಯತ್ನಿಸುತ್ತಿ­ದ್ದಾರೆ.

ಕರ್ನಾ­ಟಕ ಹಾಗೂ ಮಹಾರಾಷ್ಟ್ರದ ಜನರು ಬೇರೆ ಬೇರೆ ಅಲ್ಲ. ಎಲ್ಲರೂ ಒಂದೇ ಎನ್ನುವ ಕುರಿತು ಎಂಇಎಸ್ ಶಾಸಕರು ಹಾಗೂ ಮುಖಂಡರಿಗೆ ತಿಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಪದೇ ಪದೇ ಅವಹೇಳನಕಾರಿ ಹೇಳಿಕೆ ನೀಡುವ ಎಂಇಎಸ್‌ ಶಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು  ಮುಖ್ಯಮಂತ್ರಿಗೆ ಬರೆದ ಮನವಿ ಪತ್ರದಲ್ಲಿ ಆಗ್ರಹಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಅಧ್ಯಕ್ಷ ಕೆ.ಈ.­ನರಸಿಂಹ ಹಾಗೂ ಪದಾಧಿಕಾರಿ­ಗಳಾದ ಶ್ರೀಶೈಲಗೌಡ, ರಮೇಶಬಾಬು ಯಾಳಗಿ, ಪಿ.ಪರಮೇಶ, ಎಚ್‌.ಟಿ. ಪ್ರಕಾಶ­ಬಾಬು, ಮೂಕಪ್ಪ ಕಟ್ಟಿಮನಿ, ಮಂಜು­ನಾಥ ಕಮತರ, ನಾಗರಾಜ ಕೊಳ್ಳಿ, ಎಂ.ಎಂ.ಹಿರೇಮಠ, ಮಲ್ಲೇಶಪ್ಪ ಬ್ಯಾಗವಾಟ, ಮಲ್ಲಿಕಾರ್ಜುನ ಮಾಚ­ನೂರು, ಜಾವೀದ್‌ ಖಾನ್‌, ಗಯಾಸ್‌, ಶಿವಪ್ಪ ಭೂಸಾರೆ, ಖಲೀಲ್‌ ಖುರೇಷಿ, ಜಯರಾಜ ಕಲಂಗೇರಾ, ಕಲ್ಮಠ  ಮೊದಲಾದವರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT