ADVERTISEMENT

ಎಪಿಎಂಸಿ ಅಕ್ರಮ ಕಟ್ಟಡ ತೆರವು

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 9:15 IST
Last Updated 8 ಜೂನ್ 2011, 9:15 IST
ಎಪಿಎಂಸಿ ಅಕ್ರಮ ಕಟ್ಟಡ ತೆರವು
ಎಪಿಎಂಸಿ ಅಕ್ರಮ ಕಟ್ಟಡ ತೆರವು   

ಸಿಂಧನೂರು: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಳೆ ಪ್ರಾಂಗಣದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ಎಪಿಎಂಸಿ ಅಧ್ಯಕ್ಷೆ ಎನ್.ಶಾಂತಾ ಭೀಮನಗೌಡ ಮಂಗಳವಾರ ತೆರವುಗೊಳಿಸಲು ಸೂಚಿಸಿದ ಹಿನ್ನೆಲೆಯಲ್ಲಿ ವರ್ತಕರೇ ತಮ್ಮ ಕಟ್ಟಡಗಳನ್ನು ಒಡೆದುಕೊಂಡರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪಕ್ಕದಲ್ಲಿ ವರ್ತಕರಿಗೆ ತಲಾ 39್ಡ12 ಅಡಿಯ ನಿವೇಶನಗಳನ್ನು ನೀಡಲಾಗಿತ್ತು. ಆದರೆ ವರ್ತಕರು ತಮಗೆ ನೀಡಿದ ನಿವೇಶನಕ್ಕಿಂತ ಹೆಚ್ಚಿನ ಜಾಗೆಯನ್ನು ಅತಿಕ್ರಮಿಸಿ 51್ಡ12 ನಿವೇಶನದಲ್ಲಿ ಮಳಿಗೆ ಕಟ್ಟಿಕೊಂಡಿದ್ದರು.

ಎಪಿಎಂಸಿಯ ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನದಂದು ಬೆಳಗಿನ ಜಾವ ಪೊಲೀಸ್ ಬಿಗಿ ಭದ್ರತೆಯಲ್ಲಿ ಸಹಾಯಕ ಆಯುಕ್ತ ಉಜ್ವಲ್‌ಕುಮಾರ ಘೋಷ್ ಮತ್ತು ಎಪಿಎಂಸಿ ಕಾರ್ಯದರ್ಶಿ ಸತೀಶಕುಮಾರ ಅಕ್ರಮವಾಗಿ ಕಟ್ಟಿದ್ದ 8 ಮಳಿಗೆಗಳನ್ನು ಹಿಟಾಚಿ ಮೂಲಕ ತಾಸಿನಲ್ಲಿಯೇ ಒಡೆದುರುಳಿಸಿದ್ದರು.

ಆನಂತರ ವರ್ತಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಹೆಚ್ಚಿನ ಪ್ರಮಾಣದಲ್ಲಿ ಒಡೆಯದಂತೆ ನೋಡಿಕೊಂಡಿದ್ದರು. ಸಹಾಯಕ ಆಯುಕ್ತರು ತೆರವುಗೊಳಿಸಿದ್ದರೂ ಮಾಲೀಕರು ಮಳಿಗೆಗಳನ್ನು ಪುನಃ ಕಟ್ಟಿಕೊಂಡಿದ್ದರು.

ಮಂಗಳವಾರದ ಪ್ರಜಾವಾಣಿ ಸಂಚಿಕೆಯಲ್ಲಿ ಸಹಾಯಕ ಆಯುಕ್ತರು ಅಕ್ರಮ ಕಟ್ಟಡಗಳನ್ನು ದ್ವಂಸಗೊಳಿಸಿದರೂ ಪುನಃ ಕಟ್ಟಿಕೊಂಡ ಬಗ್ಗೆ ಪ್ರಕಟವಾದ ವರದಿಗೆ ಸ್ಪಂದಿಸಿದ ಎಪಿಎಂಸಿ ಅಧ್ಯಕ್ಷೆ ಎನ್. ಶಾಂತಾ ಭೀಮನಗೌಡ ಅತಿಕ್ರಮಣಕಾರರಿಗೆ ತೆರವುಗೊಳಿಸಲು ಸೂಚಿಸಿದರು.

ನಿರ್ದೇಶಕರಾದ ಹರಟನೂರು ಕರಿಯಪ್ಪ ವಕೀಲರು, ಮಲ್ಲನಗೌಡ ಮೇಟಿ, ಬಸನಗೌಡ, ಚನ್ನಬಸವರಾಜ ಮತ್ತಿತರರು ವರ್ತಕರ ತಮ್ಮ ಮಳಿಗೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.