ADVERTISEMENT

ಎಲ್ಲರ ಏಳಿಗೆ ಸಹಕಾರಿ ರಂಗದ ಗುರಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 6:10 IST
Last Updated 20 ಆಗಸ್ಟ್ 2012, 6:10 IST

ಮಾನ್ವಿ: ಸಹಕಾರಿ ಸಂಘಗಳ ಅಭಿವೃದ್ಧಿಯಿಂದ ಸಮಾಜದ ಎಲ್ಲ ವರ್ಗದ ಜನರ ಏಳಿಗೆ ಸಾಧ್ಯ ಎಂದು ಸಹಕಾರಿ ಧುರೀಣ ಹಾಗೂ ಆರ್‌ಡಿಸಿಸಿ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಪಾಟೀಲ್ ತೋರಣದಿನ್ನಿ ಹೇಳಿದರು.

ಭಾನುವಾರ ಪಟ್ಟಣದ ಶ್ರೀಚೆನ್ನಬಸವ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ 2011-12ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಹಕಾರಿ ಸಂಘ ಹಾಗೂ ಬ್ಯಾಂಕುಗಳಲ್ಲಿ ಠೇವಣಿ ಮತ್ತು ಸಾಲಗಳು ಸಮನಾಗಿ ಇರಬೇಕು. ಗ್ರಾಹಕರು ತಾವು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿದರೆ ಮಾತ್ರ ಸಾಲ ಶೂಲವಾಗುವುದಿಲ್ಲ. ಉತ್ತಮ ಯೋಜನೆಗಳೊಂದಿಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದಾಗ  ಸಹಕಾರಿ ಸಂಘಗಳು ಪ್ರಗತಿ ಹೊಂದಲು ಸಾಧ್ಯ.

ಶ್ರೀ ಚೆನ್ನಬಸವ ಸೌಹಾರ್ದ ಸಹಕಾರಿ ಬ್ಯಾಂಕ್   ಕಳೆದ ಮೂರು ವರ್ಷಗಳಿಂದ ಉತ್ತಮ ಸೇವೆ ನೀಡುವುದರ ಜತೆಗೆ 2011-12ನೇ ಸಾಲಿನಲ್ಲಿ ಸುಮಾರು 13ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿರುವುದು ಶ್ಲಾಘನೀಯ ಎಂದರು.

ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ, ರಾಜ್ಯ ಖಾದಿ ಮಂಡಳಿ ಅಧ್ಯಕ್ಷ ಹರವಿ ಶಂಕರಗೌಡ ಹಾಗೂ ಮಾಜಿ ಶಾಸಕ ಗಂಗಾಧರ ನಾಯಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸರ್ಕಾರಿ ಸೇವೆಯಿಂದ ನಿವೃತ್ತರಾದ ಕಾತರಕಿ ವಿಎಸ್‌ಎಸ್‌ಎನ್ ಕಾರ್ಯದರ್ಶಿ ವಿರುಪಣ್ಣ ಹಾಗೂ ಆರ್‌ಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಡಿ.ಬಸವರಾಜ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕ ಶೇಖರಪ್ಪ ಪಾಟೀಲ್ ವಾರ್ಷಿಕ ವರದಿ ಮಂಡಿಸಿದರು.

ಶ್ರೀಚೆನ್ನಬಸವ ಪತ್ತಿನ ಸೌಹಾರ್ದ ಸಹಕಾರಿಯ ಅಧ್ಯಕ್ಷ ಮಲ್ಲನಗೌಡ ಬಿ. ಪಾಟೀಲ್ ನಕ್ಕುಂದಿ ಸಭೆಯ ಅಧ್ಯಕ್ಷತೆವಹಿಸಿದ್ದರು.  ಒಳಬಳ್ಳಾರಿಯ ಸಿದ್ದಲಿಂಗ ಸ್ವಾಮಿಗಳು, ಅಡವಿ ಅಮರೇಶ್ವರದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಲೆಕ್ಕಪರಿಶೋಧಕ ನಾಗನಗೌಡ ಸಿರಗುಪ್ಪ, ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಶೇಖರಪ್ಪ ಪಾಟೀಲ್ ವಕೀಲ,  ಬ್ಯಾಂಕಿನ ಕಾರ್ಯನಿರ್ವಾಹಕ ಅಧಿಕಾರಿ ಶಶಿಕುಮಾರ ಮತ್ತಿತರರು ಇದ್ದರು.

ರಾಣಿ ಪ್ರಾರ್ಥನೆ ಗೀತೆ ಹಾಡಿದರು. ನಿರ್ದೇಶಕ ಅಮರೇಗೌಡ ಜಾನೇಕಲ್ ಸ್ವಾಗತಿಸಿದರು. ಉಪನ್ಯಾಸಕ ರೇವಣಸಿದ್ದಯ್ಯ ಹಿರೇಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.