ರಾಯಚೂರು: ಎಸ್ಯುಸಿಐ ಪಕ್ಷವು ಈ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ 6 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಈಗಾಗಲೇ ಅಭ್ಯರ್ಥಿಗಳ ಸಿದ್ಧಪಡಿಸಲಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಕೆ. ಸೋಮಶೇಖರ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಕೇಂದ್ರ ಸಮಿತಿ ಸದಸ್ಯರಾದ ಕೆ. ರಾಧಾಕೃಷ್ಣ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಾದ್ಯಂತ 83 ಕಡೆ ಹಾಗೂ ಕರ್ನಾಟಕದಲ್ಲಿ 6 ಕಡೆಗಳಲ್ಲಿ ಎಸ್ಯುಸಿಐ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಎಂ. ಉಮಾದೇವಿ, ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ ಜಾಹೀದಾ ಶಿರಿನ್, ಧಾರವಾಡ ಕ್ಷೇತ್ರಕ್ಕೆ ಗಂಗಾಧರ ಬಡಿಗೇರ, ಗುಲ್ಬರ್ಗ ಕ್ಷೇತ್ರಕ್ಕೆ ಎಸ್.ಎಂ. ಶರ್ಮಾ, ಬಳ್ಳಾರಿ ಕ್ಷೇತ್ರಕ್ಕೆ ಎ. ದೇವದಾಸ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.
ಜನ ಮತ್ತೊಂದು ಚುನಾವಣೆಗೆ ಮುಖಾಮುಖಿಯಾಗುತ್ತಿದ್ದಾರೆ. ಎರಡು ಪ್ರಮುಖ ಬಂಡವಾಳಶಾಹಿ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಅಲ್ಲದೇ ಪ್ರಾದೇಶಿಕ ಬಂಡವಾಳ ಶಾಹಿ ಪಕ್ಷಗಳು ಮತ್ತು ಸಿ.ಪಿ.ಐ, ಸಿ.ಪಿ.ಎಂ ನಂಥ ಮಿಥ್ಯ ಕಮ್ಯುನಿಸ್ಟ್ ಪಕ್ಷಗಳೂ ಜನತೆಗೆ ವಂಚನೆ ಮಾಡಿಕೊಂಡು ಬಂದಿರುವ ಪಕ್ಷಗಳಾಗಿವೆ ಎಂದು ಆರೋಪಿಸಿದರು.
ಈ ಚುನಾವಣೆಯಲ್ಲಿ ಜನರೇ ತಮ್ಮ ಅಸ್ತ್ರ ಹಿಡಿದು ಕ್ರಾಂತಿ ಮೊಳಗಿಸಬೇಕು. ಇಂಥ ಪಕ್ಷಗಳಿಗೆ ತಕ್ಕ ಉತ್ತರ ನೀಡಬೇಕು. ಬಂಡವಾಳಶಾಹಿ ಶೋಷಕ ವ್ಯವಸ್ಥೆಯಿಂದಲೇ ಉದ್ಭವವಾಗುತ್ತಿರುವ ಎಲ್ಲ ಸಮಸ್ಯೆಗಳಿಗೆ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸುವುದುರ ಮೂಲಕ ಮಾತ್ರ ಪರಿಹಾರ ಸಾಧ್ಯ ಎಂಬುದು ತಮ್ಮ ಪಕ್ಷದ ಬಲವಾದ ನಂಬಿಕೆಯಾಗಿದೆ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷದಿಂದಲೇ ಸಮಸ್ಯೆ ಪರಿಹಾರ ಆಗಲ್ಲ: ಈಚೆಗೆ, ಸ್ಥಾಪನೆಯಾಗಿರುವ ಆಮ್ ಆದ್ಮಿ ಪಕ್ಷವು ಬಂಡವಾಳಶಾಹಿಯ ವಿರೋಧಿ ಪಕ್ಷವಲ್ಲ. ಇದನ್ನು ಆ ಪಕ್ಷದ ಮುಖಂಡರಾಗಿರುವ ಕೇಜ್ರಿವಾಲ್ ಈಚೆಗೆ ಪತ್ರಿಕಾಗೋಷ್ಠಿಯಲ್ಲಿಯೇ ಸ್ಪಷ್ಟಪಡಿಸಿದ್ದಾರೆ. ತಮ್ಮ ಪಕ್ಷಕ್ಕೆ ಖಾಸಗೀಕರಣ ಪ್ರಕ್ರಿಯೆಯಲ್ಲಿ ವಿಶ್ವಾಸವಿದೆ ಎಂದು ಘೋಷಿಸಿದ್ದಾರೆ. ಆಮ್ ಆದ್ಮಿ ಪಕ್ಷದಿಂದಲೇ ಎಲ್ಲ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದು ತಿಳಿಸಿದರು.
ಅಭ್ಯರ್ಥಿ ಕೆ ಸೋಮಶೇಖರ ಯಾದಗಿರಿ, ಎಸ್ಯುಸಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ.ಟಿ.ಎಸ್ ಸುನೀತ್ಕುಮಾರ, ಅಪರ್ಣಾ ಬಿ.ಆರ್, ಎನ್.ಎಸ್ ವಿರೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.