ಮಸ್ಕಿ: ಗೋನವಾರ ಕೆರೆ ಹೂಳು ಎತ್ತುವುದು ಹಾಗೂ ಸಂತೆಕೆಲ್ಲೂರು ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೆಗೌಡ ಬಣ)ಯ ಕಾರ್ಯಕರ್ತರು ಬುಧವಾರ ಸಮೀಪದ ಸಂತೆಕೆಲ್ಲೂರು ಗ್ರಾಮ ಪಂಚಾಯ್ತಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.
ಸಂತೆಕೆಲ್ಲೂರು ಬಸ್ ನಿಲ್ದಾಣ ಅವ್ಯವಸ್ಥೆ ಸರಿಪಡಿಸಬೇಕು, ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಸ್ಥಾನಿಕ ವಾಸ್ತವ್ಯ ಮಾಡಬೇಕು, ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ದೊರೆಯಬೇಕು ಹಾಗೂ ಔಷಧ ವಿತರಣೆಯಾಗಬೇಕು ಎಂದು ಒತ್ತಾಯಿಸಿದರು. ಗೋನವಾರ ಕರೆಯಲ್ಲಿ ಹೂಳು ತುಂಬಿದ್ದು ಕೂಡಲೇ ಹೂಳು ಎತ್ತುವ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು. ನಂತರ ವಿಶೇಷ ತಹಶೀಲ್ದಾರ ಮೂಲಕ ವೇದಿಕೆ ಅಧ್ಯಕ್ಷ ಅಶೋಕ ಮುರಾರಿ ಮನವಿ ಸಲ್ಲಿಸಿದರು.
ಕೂಡಲೇ ಈ ಬೇಡಿಕೆಗಳನ್ನು ಈಡೇರಿಸಬೇಕೆಂದು ಧರಣಿ ನಿರತ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು. ಇಲ್ಲದಿದ್ದರೆ ಮುಂದಿನ ಹಂತದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ವೇದಿಕೆಯ ಮಸ್ಕಿ ಕ್ಷೇತ್ರದ ಅಧ್ಯಕ್ಷ ಅಶೋಕ ಮುರಾರಿ, ತಾಲ್ಲೂಕು ಅಧ್ಯಕ್ಷ ಬಿ. ಮೌಲಾ ಹುಸೇನ್, ಪ್ರಧಾನ ಕಾರ್ಯದರ್ಶಿ ಹನುಮಂತ ಹೂಗಾರ, ನಗರ ಘಟಕದ ಅಧ್ಯಕ್ಷ ರವಿ ಚಂದನಕೇರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜೇಶ ಮಾಣಿಕ್, ಸಂತೆಕೆಲ್ಲೂರು ಗ್ರಾಮ ಘಟಕದ ಅಧ್ಯಕ್ಷ ವೆಂಕಟೇಶ ಹೊಸಮನಿ, ಉಪಾಧ್ಯಕ್ಷ ಬಸ್ಸಯ್ಯ ಪೂಲಭಾವಿ, ಗಂಗಾಧರ ಮುರಾರಿ, ದುರಗಪ್ಪ ವಿಭೂತಿ ಸೇರಿದಂತೆ ಹಲವಾರು ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.