ADVERTISEMENT

ಕಾರ್ಖಾನೆ ಬಂದ್:ನೌಕರರ ಸಂಘದ ಧರಣಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 9:23 IST
Last Updated 19 ಜುಲೈ 2013, 9:23 IST

ರಾಯಚೂರು: ತಾಲ್ಲೂಕಿನ ಹೆಗ್ಗಸನಹಳ್ಳಿ ಸಮೀಪ ಇರುವ ಮೈಸೂರು ಪೆಟ್ರೊ ಕೆಮಿಕಲ್ಸ್(ಎಂಪಿಸಿಎಲ್) ಕಾರ್ಖಾನೆಯನ್ನು ಕಂಪೆನಿ ಆಡಳಿತ ಮಂಡಳಿ ಹಠಾತ್ ಮುಚ್ಚಿದ್ದು, ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ. ಕಾರ್ಖಾನೆ ಮುಚ್ಚುವಿಕೆ ಸಂಪೂರ್ಣ ಕಾನೂನು ಬಾಹಿರವಾಗಿದೆ.

ಕೂಡಲೇ ಮಧ್ಯ ಪ್ರವೇಶಿಸಿ ಕಾರ್ಖಾನೆಯನ್ನು ಪುನಃ ಆರಂಭಿಸುವ ವ್ಯವಸ್ಥೆ ಮಾಡಬೇಕು ಎಂದು ಮೈಸೂರು ಪೆಟ್ರೊ ಕೆಮಿಕಲ್ಸ್ ನೌಕರರ ಸಂಘ ಗುರುವಾರ ಪ್ರತಿಭಟನೆ ನಡೆಸಿತು.

ಬೆಳಿಗ್ಗೆ ಹೆಗ್ಗಸನಹಳ್ಳಿಯ ಕಾರ್ಖಾನೆಯಿಂದ ದ್ವಿಚಕ್ರವಾಹನ ರ‌್ಯಾಲಿಯಲ್ಲಿ ಆಗಮಿಸಿದ 120 ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಧರಣಿ ಮಾಡಿದರು.

ಕಳೆದ 40 ವರ್ಷಗಳ ಹಿಂದೆ ಕಾರ್ಖಾನೆ ಆರಂಭಗೊಂಡಿದೆ. ಜುಲೈ 16ರಂದು ದಿಢೀರ್ ಮುಚ್ಚಿದೆ. ಆಡಳಿತ ವರ್ಗ ಕಾರ್ಮಿಕ ಕಾಯ್ದೆ 1947ನ್ನು ಪಾಲಿಸಿಲ್ಲ. ಹಠಾತ್ ಮುಚ್ಚಿ ಕಾರ್ಮಿಕರನ್ನು ಬೀದಿಗೆ ತಳ್ಳಿದೆ ಎಂದರು.

ಕಾರ್ಖಾನೆ ನಷ್ಟದಲ್ಲಿದೆ, ಆಧುನೀಕರಣಗೊಳಿಸಬೇಕು, ಮೂಲಭೂತ ಸೌಕರ್ಯ ಕೊರತೆ ಇದೆ, ಕಚ್ಚಾ ವಸ್ತು ಬೆಲೆ ಏರಿಕೆ ಆಗಿದೆ ಎಂಬ ಕಾರಣಗಳನ್ನು ಆಡಳಿತ ಮಂಡಳಿ ಕಳೆದ 5 ವರ್ಷಗಳಿಂದ ಸುಳ್ಳು ಹೇಳಿಕೊಂಡು ಬಂದು ಈಗ ಕಾರ್ಖಾನೆ ಮುಚ್ಚಿದೆ ಎಂದು ಆಪಾದಿಸಿದರು.

ಇಲ್ಲಿನ ಕಾರ್ಖಾನೆ ಲಾಭದಲ್ಲಿತ್ತು. ಇದರ ಲಾಭಾಂಶದ ಮೇಲೆಯೇ ಮಹಾರಾಷ್ಟ್ರದಲ್ಲಿ ಆಡಳಿತ ಮಂಡಳಿ ಕೆಲ ಕಂಪೆನಿ ಆರಂಭಿಸಿದೆ. ಕಾರ್ಖಾನೆ ಮುಚ್ಚುವ ವಿಷಯ ಗುಪ್ತವಾಗಿಟ್ಟಿದೆ. ಕಾರ್ಮಿಕರ ಸಂಘದವರಿಗೂ ಮಾಹಿತಿ ಕೊಟ್ಟಿಲ್ಲ.  ಕಾನೂನು ಬಾಹಿರವಾಗಿ ಕಾರ್ಖಾನೆ ಮುಚ್ಚಲಾಗಿದೆ ಎಂದು ದೂರಿದರು.

ಕಾನೂನು ಬಾಹಿರವಾಗಿ ಕಾರ್ಖಾನೆ ಮುಚ್ಚಿದ ಆಡಳಿತ ವರ್ಗದ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮೈಸೂರು ಪೆಟ್ರೊ ಕೆಮಿಕಲ್ಸ್ ನೌಕರರ ಸಂಘದ ಅಧ್ಯಕ್ಷ ಭೀಮಣ್ಣ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಬಿ ಆಗ್ರಹಿಸಿದರು.

ಉಪಾಧ್ಯಕ್ಷ ಬಿ ಮಧುಕರ್, ಜಂಟಿ ಕಾರ್ಯದರ್ಶಿ ಮರಡಿಸಾಬ್, ಸಂಘಟನಾ ಕಾರ್ಯದರ್ಶಿ ಬಾಷುಮಿಯಾ, ಖಜಾಂಚಿ ಅಂಬರೀಶ, ಕಾರ್ಮಿಕ ಮತ್ತು ಸಿಐಟಿಯು ಮುಖಂಡ ಶೇಕ್ಷಾ ಖಾದ್ರಿ, ಶರಣಗೌಡ, ಡಿ.ಎಸ್  ಶರಣಬಸವ ಹಾಗೂ ಇತರರು ನೇತೃತ್ವ ವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.