ದೇವದುರ್ಗ: ಪುರಸಭೆ ವ್ಯಾಪ್ತಿಯಲ್ಲಿ ಬರುವ ಬಹುತೇಕ ವಾರ್ಡ್ಗಳಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿಗೆ ತೊಂದರೆ ಎದುರಾಗಿದ್ದು, ಬೆಳಗಾದರೆ ಸಾಕು ಜನರು ಖಾಲಿ ಕೂಡ ಹಿಡಿದು ನೀರಿಗಾಗಿ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣಕ್ಕೆ ಪಕ್ಕದ ಕೃಷ್ಣಾ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಬೇಸಿಗೆ ಪ್ರಯುಕ್ತ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಜಾಕ್ವೆಲ್ ಹತ್ತಿರ ನೀರಿನ ಸಂಗ್ರಹ ತೀರ ಕಡಿಮೆಯಾಗಿ ಮರಳು ತೇಲಿರುವುದರಿಂದ ಪಟ್ಟಣದ ಜನತೆಗೆ ಬೇಕಾಗುವಷ್ಟು ಪ್ರಮಾಣದ ನೀರು ನದಿಯಿಂದ ದೊರಕುತ್ತಿಲ್ಲ. ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಇದ್ದ ಬೋರ್ವೆಲ್ಗಳ ಅಂತರ್ಜಲ ಕುಸಿದಿದ್ದು, ಇದಕ್ಕೆ ಮಳೆಯ ಅಭಾವವೇ ಕಾರಣ ಎನ್ನಲಾಗಿದೆ.
ಜೂನ್ ಕಳೆಯುತ್ತಿದ್ದರೂ ಮಳೆ ಬರದೆ ಬಿಸಿಲಿನ ಜಳ ಹೆಚ್ಚಾಗಿರುವುದು ಕಂಡು ಬಂದಿದೆ. ಭಾನುವಾರ ಸಂಜೆ ಮೊಡ ಕವಿದ ವಾತಾವರಣ ಇದ್ದರೂ ಮಳೆ ಬರಲಿಲ್ಲ. ಒಂದು ಕಡೆ ರೈತ ಮಳೆಗಾಗಿ ಮುಗಿಲು ನೋಡೂತ್ತಿದ್ದರೆ ಇನ್ನೊಂದು ಕಡೆ ಕುಡಿಯುವ ನೀರಿನ ತೊಂದರೆಯಿಂದ ಜನರು ಬಳಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ಪಟ್ಟಣದ ಜನರ ತೊಂದರೆಯಾದರೆ ಇನ್ನೂ ಗ್ರಾಮೀಣ ಭಾಗದ ಕುಡಿಯುವ ನೀರಿನ ತೊಂದರೆ ಹೇಳ ತೀರದಾಗಿದೆ. ತಾಲ್ಲೂಕಿನ ಜೇರಬಂಡಿ, ಕೊಪ್ಪರ, ಗೂಗಲ್, ಗಬ್ಬೂರು ಮತ್ತು ನಾಗಡದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನೂರಾರು ಗ್ರಾಮಗಳ ಜನರು ಹನಿ ನೀರಿಗಾಗಿ ತೊಂದರೆ ಪಡುವಂಥ ಸ್ಥಿತಿ ಬಂದಿದೆ.
ಕೆಲವು ಗ್ರಾಮಗಳಲ್ಲಿ ವಿವಿಧ ಯೋಜನೆಗಳ ಅನುದಾನದಲ್ಲಿ ಕೈಗೆತ್ತಿಕೊಂಡ ಕಿರು ನೀರು ಸರಬರಾಜು ಕಾಮಗಾರಿಗಳು ಅಧಿಕಾರಿ ಮತ್ತು ಗುತ್ತೆಗೆದಾರನ ನಿರ್ಲಕ್ಷ್ಯದಿಂದಾಗಿ ನೆನೆಗುದಿಗೆ ಬಿದ್ದರೂ ಅತ್ತಕಡೆ ಗಮನ ಹರಿಸುವರು ಇಲ್ಲದಂತಾಗಿದೆ. ಕೆಲವು ಗ್ರಾಮಗಳಲ್ಲಿ ಹಣ ಖರ್ಚಾದರೂ ಜನರಿಗೆ ನೀರು ಸಿಗದಂತಾಗಿದ್ದು, ಈ ಬಗ್ಗೆ ಕೇಳವರು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಉಳಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.