ಲಿಂಗಸುಗೂರ: ಕ್ರೀಡೆಗಳು ಸೌಹಾರ್ದತೆಯ ಸಂಕೇತವಾಗಿವೆ. ಕ್ರೀಡಾ ಮನೋಭಾವನೆ ಬೆಳೆಸುವುದರಿಂದ ಸ್ವಸ್ತ ಸಮಾಜ ನಿರ್ಮಾಣ ಸಾಧ್ಯ. ಅಂತೆಯೇ ತಾವು ಕರ್ತವ್ಯ ನಿರ್ವಹಿಸುವ ಎಲ್ಲೆಡೆ ಟೆನ್ನಿಸ್ ಪಂದ್ಯಾವಳಿ ಆಯೋಜಿಸುತ್ತ ಬಂದಿರುವೆ. ತಾವು ಕಂಡಿರುವ ಕ್ರೀಡಾಂಗಣಗಳ ಪೈಕಿ ಲಿಂಗಸುಗೂರಿನ ಕ್ರೀಡಾಂಗಣದ ವಾತಾವರಣಕ್ಕೆ ಮನಸೋತಿರುವುದಾಗಿ ಈಶಾನ್ಯ ವಲಯ ಮಹಾ ನಿರೀಕ್ಷಕ ಕೆ.ವಿ. ಗಗನ್ದೀಪ್ ಹೇಳಿದರು.
ಭಾನುವಾರ ಹೊನಲು ಬೆಳಕು ಟೆನ್ನಿಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಹಿಂದೆ ಬ್ರಿಟಿಷ್ ಅಧಿಕಾರಿಗಳು ಈ ಮೈದಾನವನ್ನು ಕ್ರೀಡೆಗಳಿಗೆ ಬಳಸುತ್ತಿದ್ದರು ಎಂಬ ಮಾಹಿತಿ ಕೇಳಿ ಕಳೆದ ಮಾರ್ಚ್ದಲ್ಲಿ ಭೇಟಿ ನೀಡಿದ್ದೆ. ಕೆರೆಯ ದಂಡೆಯ ಎತ್ತರದ ಪ್ರದೇಶದ ಮೇಲಿರುವ ಕಟ್ಟಡ, ಗಿಡಮರಗಳಿಂದ ಆವೃತಗೊಂಡ ಮೈದಾನ ಕಂಡು ಮೂಕವಿಸ್ಮಿತನಾಗಿದ್ದೆ. ಆಗಲೆ ಸಂಬಂಧಿಸಿದವರನ್ನು ಕಂಡು ಮಾತನಾಡಿ ಪಂದ್ಯಾವಳಿ ಆಯೋಜನೆಗೆ ಮುಂದಾಗಿರುವುದಾಗಿ ಅನುಭವ ಹಂಚಿಕೊಂಡರು.
ಟೆನ್ನಿಸ್ ಕ್ರೀಡೆ ಜೊತೆಗೆ ಇತರೆ ಕ್ರೀಡೆಗಳಿಗೂ ಉತ್ತೇಜನ ನೀಡುವ ಕೆಲಸ ಈ ಭಾಗದಲ್ಲಿ ನಡೆಯಬೇಕು. ಸ್ಪೋರ್ಟ್ಸ್ ಕ್ಲಬ್ ಇಷ್ಟಕ್ಕೆ ಸೀಮಿತವಾಗದೆ. ಈ ಭಾಗದಿಂದ ಉತ್ತಮ ಕ್ರೀಡಾಪಟುಗಳನ್ನು ನೀಡುವಂತಹ ಕೆಲಸಕ್ಕೆ ಮುಂದಾಗಬೇಕು. ಈ ಪ್ರದೇಶದ ಜನತೆ ಸಹಕಾರಿ ಮನೋಭಾವನೆ ಹೊಂದಿದವರಾಗಿದ್ದಾರೆೆ. ಜನಸಮಾನ್ಯರ ಪ್ರೀತಿ ವಿಶ್ವಾಸದೊಂದಿಗೆ ಇಲಾಖೆ ಉತ್ತಮ ಸೇವೆ ನೀಡಲು ಕ್ರೀಡೆ ಸಹಕಾರಿ ಆಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ 48ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ಪೊಲೀಸ್ ವರಿಷ್ಠಾಧಿಕಾರಿಗಳಾದ ಶಶಿಕುಮಾರ ರಾಯಚೂರು, ಸತೀಶಕುಮಾರ ಬೀದರ, ಪ್ರವೀಣ ಮಧುಕರ ಪವಾರ ಗುಲ್ಬರ್ಗ, ಪೊಲೀಸ್ ಉಪ ವಿಭಾಗಾಧಿಕಾರಿಗಳಾದ ಎಚ್. ಆಂಜನೇಯ ಲಿಂಗಸುಗೂರ, ಕುಮಾರ ಬೀದರ ಸೇರಿದಂತೆ ಇತರೆ ಅಧಿಕಾರಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಮುಖಂಡರಾದ ಡಾ.ಶರಣಗೌಡ, ಡಾ. ಎಲ್.ಎನ್ ನಡುವಿನಮನಿ, ಆರ್.ಎಸ್. ನಾಡಗೌಡ್ರ, ಶರಣಗೌಡ ಬಯ್ಯಾಪೂರ, ಶರಣಪ್ಪ ಮೇಟಿ, ಭೂಪನಗೌಡ ಕರಡಕಲ್ಲ, ರಮೇಶ ಜೋಷಿ, ಎಚ್.ಬಿ. ಮುರಾರಿ, ಪಾಮಯ್ಯ ಮುರಾರಿ, ಶಂಕರಗೌಡ ಅಮರಾವತಿ, ಮಾನಪ್ಪ ಪವಾರ, ಮಹಾಂತಯ್ಯಸ್ವಾಮಿ, ರಾಜಶೇಖರ ಹೊನ್ನಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.