ಹಟ್ಟಿ ಚಿನ್ನದ ಗಣಿ: ಆನ್ವರಿ, ಚುಕನಟ್ಟಿ, ಹಿರೇನಗನೂರು ಹಾಗೂ ಹೊಸೂರು ಗ್ರಾಮಗಳಲ್ಲಿ ಕುಡಿಯುವ ನೀರು ಇಲ್ಲದೇ ಜನರು ಪರದಾಡುತ್ತಿದ್ದಾರೆ. ತಕ್ಷಣ ಕುಡಿಯುವ ನೀರು ಪೂರೈಸಲು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ಕೀರ್ತನಾ ಮತ್ತು ಶಕ್ತಿ ಮಹಾ ಮಹಿಳಾ ಸಂಘಟನೆಗಳು ಆನ್ವರಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಖಾಲಿ ಕೊಡಗಳನ್ನು ಹಿಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮೊದಲು ಈ ಉಭಯ ಸಂಘಟನೆಗಳ ನೂರಾರು ಕಾರ್ಯಕರ್ತೆಯರು ಖಾಲಿ ಕೊಡಗಳನ್ನು ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.
ನಂತರ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಸಮಾವೇಶಗೊಂಡರು. ದಶಕಗಳು ಕಳೆದರೂ ಆನ್ವರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಹೊಂದಿಲ್ಲ. ಅನುದಾನವು 7 ಲಕ್ಷದಿಂದ 1 ಕೋಟಿಗೂ ಹೆಚ್ಚಾದರೂ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಹಾಗೆಯೇ ಇದೆ. ಅಧಿಕಾರ ವಿಕೇಂದ್ರಿಕರಣಗೊಂಡರೂ ಪ್ರಯೋಜನವಾಗಿಲ್ಲ ಎಂದು ಮುಖಂಡರು ಆರೋಪಿಸಿದರು.
ಕಾಳೇಶ್ವರ ಹಳ್ಳದಿಂದ ಬರುವ ಕುಡಿಯುವ ನೀರು ಪೂರೈಸಲು ಎಲ್ಲಾ ವಾರ್ಡ್ಗಳಲ್ಲಿ ಸಾರ್ವಜನಿಕ ನಳಗಳನ್ನು ಅಳವಡಿಸಬೇಕು. ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ತಡೆಗಟ್ಟಬೇಕು. ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ಗ್ರಾಮ ಮತ್ತು ವಾರ್ಡ್ ಸಭೆಗಳಲ್ಲಿ ರೂಪಿಸಬೇಕು.
ವೈಯಕ್ತಿಕ ಶೌಚಾಲಯಕ್ಕೆ ಅನುದಾನ ಬಿಡುಗಡೆ ಮಾಡಬೇಕು. ನ್ಯಾಯ ಬೆಲೆ ಅಂಗಡಿಗಳ ಅವ್ಯವಹಾರಕ್ಕೆ ಕಡಿವಾಣ ಹಾಕಬೇಕು. 2006-07ರಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿ ನಡೆದ ಕಾಮಗಾರಿಗಳ ತನಿಖೆ ನಡೆಸುವುದು ಸೇರಿದಂತೆ ಒಟ್ಟು 18 ಬೇಡಿಕೆಗಳು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಪ್ರತಿಭಟನೆಯ ನೇತೃತ್ವವನ್ನು ಆಲೀಸ್ ಮೇರಿ, ಹಯಮ್ಮ, ಜನಿಂತಾ, ಮೇರಿಯಮ್ಮ, ಲಕ್ಷ್ಮೀ, ಶರಣಮ್ಮ ವಹಿಸಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.