ADVERTISEMENT

ಗುತ್ತಿಗೆ ಕಾರ್ಮಿಕರಿಂದ ಅನಿರ್ದಿಷ್ಟ ಧರಣಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 11:17 IST
Last Updated 10 ಜುಲೈ 2013, 11:17 IST

ರಾಯಚೂರು: ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕರಿಗಾಗಿ ಪ್ರತ್ಯೇಕ ಭವಿಷ್ಯನಿಧಿ(ಪಿಎಫ್) ಖಾತೆ ತೆಗೆಯಬೇಕು ಎಂದು ಕರ್ನಾಟಕ ರಾಜ್ಯ ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕರ ಒಕ್ಕೂಟ(ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಮಂಗಳವಾರ ಬಿಎಸ್‌ಎನ್‌ಎಲ್ ಪ್ರಧಾನ ವ್ಯವಸ್ಥಾಪಕ ಕಚೇರಿ ಎದುರು ಅನಿರ್ದಿಷ್ಟ ಧರಣಿ ನಡೆಸಿದರು.

ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ನೀಡಬೇಕಾದ ವೇತನ, ಭವಿಷ್ಯ ನಿಧಿ, ತುಟ್ಟಿಭತ್ಯೆ ನೀಡುತ್ತಿಲ್ಲ. ಎಂಟು ಗಂಟೆಗಳಗಿಂತ ಹೆಚ್ಚು ಕಾಲ ದುಡಿಸಿಕೊಳ್ಳಲಾಗುತ್ತಿದೆ. ಈ ಬೇಡಿಕೆಗಳಿಗಾಗಿ ಕಳೆದ 2011ರಿಂದ ಗುತ್ತಿಗೆ ಕಾರ್ಮಿಕರ ಹೋರಾಟ ನಡೆಸುತ್ತಾ ಬಂದಿದ್ದರೂ ಯಾವುದೇ ಪರಿಹಾರ ಕಲ್ಪಿಸಿಲ್ಲ ಎಂದು ಅಧ್ಯಕ್ಷ ಜಿ.ಮಲ್ಲೇಶ ಆಪಾದಿಸಿದರು.

ಕಳೆದ 2001ರಿಂದ 31ಡಿಸೆಂಬರ್ 2003ರವರೆಗಿನ ಭವಿಷ್ಯನಿಧಿ(ಪಿಎಫ್) 12,20,000 ರೂಪಾಯಿಗಳು ಹಾಗೂ 1ಜನವರಿ 2004ರಿಂದ 31ಡಿಸೆಂಬರ್ 2004ರವರೆಗಿನ 6.40,992 ರೂಪಾಯಿಗಳ ಭವಿಷ್ಯನಿಧಿಯನ್ನು ಕಾರ್ಮಿಕರಿಗೆ ನೀಡಲು ಆದೇಶಿಸಬೇಕು. ಪಿಎಫ್ ಉಪಖಾತೆಗೆ ಆಗಸ್ಟ್ 2010ರಿಂದ ಪಿಎಫ್ ಹಣವನ್ನು ಕಾರ್ಮಿಕರ ಜಮಾ ಮಾಡಬೇಕು ಎಂದು ಅಧ್ಯಕ್ಷ ಜಿ.ಮಲ್ಲೇಶ ಒತ್ತಾಯಿಸಿದರು.

ಗುತ್ತಿಗೆ ಕಾರ್ಮಿಕರ ಪಿಎಫ್ ಹಣ ಜಮಾ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಮೇ ಹಾಗೂ ಜೂನ್ ತಿಂಗಳ ವೇತನ ಹಾಗೂ    ತುಟ್ಟಿಭತ್ಯೆಯನ್ನು ಕೂಡಲೇ ಕಾರ್ಮಿಕರಿಗೆ ನೀಡಬೇಕು. ಪಿಎಫ್ ಹಣ ನೀಡದ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕಾರ್ಯದರ್ಶಿ ಪ್ರದೀಪ ಆಗ್ರಹಿಸಿದರು.

ಗುತ್ತಿಗೆ ಕಾರ್ಮಿಕರನ್ನು 8ಗಂಟೆಗಿಂತ ಹೆಚ್ಚು ದುಡಿಸಿಕೊಂಡರೆ ಹೆಚ್ಚುವರಿ ವೇತನ ನೀಡಬೇಕು, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಿ ಕನಿಷ್ಠ 10 ಸಾವಿರ ರೂಪಾಯಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ವಿಜಯಕುಮಾರ ಗೋನ್ವಾರ, ಆರ್. ವೆಂಕಟೇಶ, ಮಲ್ಲಿಕಾರ್ಜುನ, ಜಯಪ್ಪ, ಸತ್ಯನಾರಾಯಣ, ರಾಮಯ್ಯ, ಹನುಮಂತ ಹಾಗೂ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.