ADVERTISEMENT

ಗ್ರಾಮದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ದುಡಿಯೋಣ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 9:40 IST
Last Updated 7 ಜನವರಿ 2012, 9:40 IST

ಹಟ್ಟಿ ಚಿನ್ನದ ಗಣಿ: ಗ್ರಾಮ ಅಭಿವೃದ್ಧಿ ಆಗಬೇಕಾದರೆ ಪಕ್ಷಭೇದ ಮರೆತು ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ದುಡಿಯಬೇಕೆಂದು ಲಿಂಗಸುಗೂರ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ ಹೇಳಿದರು.

ಅವರು ಇಲ್ಲಿಗೆ ಸಮೀಪದ ಗೆಜ್ಜಲಗಟ್ಟಾ ಗ್ರಾಮದಲ್ಲಿ ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ನೂತನ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿ, ಪೂರ್ಣಗೊಂಡ ಸಮುದಾಯ ಭವನ, ಅಂಗನವಾಡಿ ಹಾಗೂ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿ, ಗೆಜ್ಜಲಗಟ್ಟಾ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರ ಆರಂಭಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ಥಾವನೆಯನ್ನು ಸಲ್ಲಿಸಲಾಗಿದೆ ಆದಷ್ಟು ಬೇಗ ಕಾಮಗಾರಿ ಶುರುಮಾಡಲಾಗುವದು ಎಂದರು.

ಗ್ರಾಮದ ಮುಖಂಡರಾದ ಲಿಂಗರಾಜ ಭೂಪಾಲ್ ಮಾತನಾಡಿ, ಗ್ರಾಮದಲ್ಲಿ ಇನ್ನೂ ಚರಂಡಿ ಮತ್ತು ರಸ್ತೆಗಳ ಕೆಲಸ ಆಗಬೇಕಾಗಿದೆ. ಗ್ರಾಮದ ಮುಖ್ಯ ರಸ್ತೆ ಮರು ಡಾಂಬರೀಕರಣ ಮಾಡಬೇಕು. ಯೋಜನೆಯ ಪ್ರಕಾರ ಚರಂಡಿಗಳು ನಿರ್ಮಾಣಗೊಂಡಿಲ್ಲ.  ಗ್ರಾಮ ಸಭೆಯಲ್ಲಿ ಜನರು ಕಾಮಗಾರಿಗಳನ್ನು ಮಾಡುವಂತೆ ಒತ್ತಾಯಿಸಬೇಕು. ಗ್ರಾಮಸಭೆಗಳು ಗ್ರಾಮಸ್ಥರ ಅಭಿಪ್ರಾಯ ನೀಡಬೇಕೆಂದರು.

ವೆಂಕಟರಾವ್ ಜಾಗಿರ‌್ದಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಶಿವರೆಡ್ಡಿ ಮಾತನಾಡಿದರು. ಅಧ್ಯಕ್ಷತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ ಮಾನಪ್ಪ ವಹಿಸಿಕೊಂಡಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ದುರುಗಮ್ಮ ಗುಂಡಪ್ಪನಾಯಕ, ಬಸನಗೌಡ ಕೊಡ್ಲಿ, ರುದ್ರಪ್ಪ ನೀಲಕಂಠಪ್ಪ ಕರಡಕಲ್, ಗ್ರಾಮ ಪಂಚಾಯಿತಿ ಸದಸ್ಯರಾದ, ರಂಗಪ್ಪ, ಚಾಂದಪಾಶಾ, ವೀರಭದ್ರಪ್ಪ, ಖಾಸಿಮಪ್ಪ, ಗ್ರಂಥ ಪಾಲಕರಾದ ನರಸರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಂಡಪ್ಪ ನಾಯಕ ಇದ್ದರು. ಮುಸ್ಲಿಂ ಬಾಂಧವರು ಗ್ರಾಮದಲ್ಲಿ ಉರ್ದು ಶಾಲೆ ಆರಂಭಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಶಿಕ್ಷಣ ಇಲಾಖೆಗೆ ಪರಿಶೀಲಿಸುವಂತೆ ಸೂಚಿಸುವುದಾಗಿ ಶಾಸಕರು ಭರವಸೆ ನೀಡಿದರು.

ಅಸಮಾಧಾನ: ಸುವರ್ಣ ಗ್ರಾಮೋದಯ ಯೋಜನೆಯಡಿಯಲ್ಲಿ ಗ್ರಾಮದಲ್ಲಿ ಪೂರ್ಣ ಕೆಲಸ ನಡೆದಿಲ್ಲ. ಭೂಸೇನಾ ನಿಗಮದವರು ಯೋಜನೆಯಂತೆ ಕಾಮಗಾರಿ ಮಾಡಿಲ್ಲ. ಸರಿಯಾದ ಕೆಲಸ ಆಗಿಲ್ಲ ಎಂದು ಗ್ರಾಮಸ್ಥರು  ಶಾಸಕರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.