ರಾಯಚೂರು: ಲೋಕಸಭಾ ಚುನಾವಣೆ ಕುರಿತ ದೂರು ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿ ಕಾರ್ಯಾಲಯದಲ್ಲಿ ದೂರವಾಣಿ ಸಂಖ್ಯೆ 1950 ಮತ್ತು 08532–227077 ಆರಂಭಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ದೂರು ವಿಭಾಗವು ವಾರದ ಎಲ್ಲ ದಿನಗಳಲ್ಲಿಯೂ ಹಾಗೂ ದಿನದ 24 ತಾಸು ಕಾಲ ಕಾರ್ಯ ನಿರ್ವಹಿಸಲಿದೆ. ಚುನಾವಣೆಗೆ ಸಂಬಂಧಪಟ್ಟ ದೂರುಗಳನ್ನು ಈ ದೂರವಾಣಿ ಸಂಖ್ಯೆಗೆ ನೇರವಾಗಿ ದಾಖಲಿಸಬಹುದು ಎಂದರು.
ಮಾಧ್ಯಮ ಪರಿಶೀಲನಾ ಸಮಿತಿ ರಚನೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಮೇದುವಾರರಾಗಲಿರುವ ಹಾಗೂ ರಾಜಕೀಯ ಪಕ್ಷಗಳು ಚುನಾವಣೆಗಳಿಗಾಗಿ ಪತ್ರಿಕೆಗಳಲ್ಲಿ ಹಾಗೂ ವಿದ್ಯುನ್ಮಾನ ಮತಯಂತ್ರ ನೀಡುವ ಜಾಹೀರಾತುಗಳನ್ನು ಖುದ್ದಾಗಿ ಪ್ರತಿ ದಿನವೂ ಪರಿಶೀಲಿಸಿ ಜಿಲ್ಲಾಚುನಾವಣಾಧಿಕಾರಿಗಳಿಗೆ ವರದಿ ನೀಡಲು ನಾಲ್ಕು ಅಧಿಕಾರಿ ಹಾಗೂ ಹಿರಿಯ ಪತ್ರಕರ್ತರ ತಂಡ ರಚನೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎಸ್.ಎನ್ ನಾಗರಾಜು ಹೇಳಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ಅಧ್ಯಕ್ಷರಾಗಿದ್ದು, ಉಪ ವಿಭಾಗಾಧಿಕಾರಿಗಳು, ದೂರದರ್ಶನ ಕೇಂದ್ರ ನಿಲಯ ನಿರ್ದೇಶಕ, ಹಿರಿಯ ಪತ್ರಕರ್ತ ಕೆ ರಾಮಕೃಷ್ಣ ಸದಸ್ಯರಾಗಿದ್ದಾರೆ. ವಾರ್ತಾಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಟಿ ಕನುಮಪ್ಪ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಚುನಾವಣೆ: ಕೇಂದ್ರ ಸ್ಥಾನ ಬಿಡದಂತೆ–ರಜೆ ಹಾಕದಂತೆ ಡಿಸಿ ಸೂಚನೆ: ಲೋಕಸಭಾ ಚುನಾವಣೆ ಇರುವುದರಿಂದ ಜಿಲ್ಲೆ ಎಲ್ಲ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಕೇಂದ್ರ ಸ್ಥಾನ ಬಿಡಬಾರದು ಮತ್ತು ರಜೆ ಹಾಕಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್.ಎನ್ ನಾಗರಾಜು ಆದೇಶ ಮಾಡಿದ್ದಾರೆ.
ರಜೆ ಮೇಲಾಗಲಿ ಅಥವಾ ಸರ್ಕಾರಿ ಕೆಲಸದ ನಿಮಿತ್ತ ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು. ರಜೆ ಅಥವಾ ಕೇಂದ್ರ ಸ್ಥಾನ ಬಿಡುವ ಸಂದರ್ಭಗಳು ಉದ್ಭವಿಸಿದಲ್ಲಿ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾಚುನಾವಣಾ ಅಧಿಕಾರಿಗಳ ಪೂರ್ವಾನುಮತಿ ಪಡೆದುಕೊಂಡು ಹೋಗಬೇಕು. ಆದೇಶ ಉಲ್ಲಂಘನೆ ಮಾಡಿದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.