ADVERTISEMENT

‘ಜಾಗತೀಕರಣದಿಂದ ಭಾಷೆ, ಸಂಸ್ಕೃತಿಗೆ ಅಪಾಯ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 4:48 IST
Last Updated 18 ಡಿಸೆಂಬರ್ 2017, 4:48 IST

ಹಟ್ಟಿ ಚಿನ್ನದ ಗಣಿ: ‘ಜಾಗತೀಕರಣದ ಪ್ರಭಾವದಿಂದ ಕನ್ನಡ ಭಾಷೆ ನಶಿಸುತ್ತಿದೆ. ಆಧುನೀಕರಣದಿಂದ ದೇಶದ ಸಂಸ್ಕೃತಿ ಹಾಳಾಗುತ್ತಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಎಚ್‌. ಶಿವರಾಮೇಗೌಡ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೊಡ್ಡ ಉದ್ದಿಮೆದಾರರು ಸಾವಿರಾರು ಕೋಟಿ ಸಾಲ ಪಡೆದು ದೇಶ ಬಿಟ್ಟು ಹೋಗಿ ಐಷಾರಾಮಿ ಜೀವನ ನಡಸುತ್ತಿದ್ದಾರೆ. ರೈತರು ₹ 50 ಸಾವಿರ ಸಾಲ ಮಾಡಿ ಧೃತಿಗೆಡಬಾರದು’ ಎಂದರು.

‘ಕ್ರಿಕೆಟ್‌ ದೇಸಿಯ ಆಟಗಳನ್ನು ನಾಶ ಮಾಡುತ್ತಿದೆ. ಟಿವಿ ನಮ್ಮ ಸಂಸ್ಕೃತಿ ಕೆಡಿಸುತ್ತಿದೆ. ಭವಿಷ್ಯ ಹೇಳುವ ನೆಪದಲ್ಲಿ ಮೌಢ್ಯ ಪ್ರಸಾರ ಮಾಡಲಾಗುತ್ತಿದೆ. ಪಾಲಕರು ಮಕ್ಕಳಲ್ಲಿ ಇಂಗ್ಲಿಷ್‌ ವ್ಯಾಮೋಹ ಬೆಳಸಬಾರದು. ಇಂಗ್ಲಿಷ್‌ ಕೊರಳಿನ ಭಾಷೆಯಾದರೆ ಕನ್ನಡ ಕರುಳಿನ ಭಾಷೆ ಎಂದರು. ಕಂಪ್ಯೂಟರೀಕರಣದಿಂದ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ದೇಶದ ನಿರುದ್ಯೋಗ ಸಮಸ್ಯೆ ಸಂಪೂರ್ಣ ನಿವಾರಣೆಯಿಂದ ಮಾತ್ರ ಅಚ್ಛೆದಿನ್‌ ಬರುತ್ತದೆ’ ಎಂದರು.

ADVERTISEMENT

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ ಕುಮಾರ್‌ ಸಿ.ಕೆ. ಜೈನ್‌, ಕಾರ್ಮಿಕ ಸಂಘದ ಅಧ್ಯಕ್ಷ ವಾಲೇಬಾಬು, ನಟ ಬ್ಯಾಂಕ್‌ ಜನಾರ್ಧನ ಮಾತನಾಡಿದರು. ಕೆ.ವಿ. ಕಳ್ಳಿಮಠ, ಮೌನೇಶ ಕಾಕಾನಗರ, ಶ್ರೀನಿವಾಸ, ಎಂ.ಎಂ. ಶಾಲಿ ಇದ್ದರು. ಪ್ರಭು ಸ್ವಾಗತಿಸಿ, ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.