ADVERTISEMENT

ಜೆಸಿಟಿಯು ಕಾರ್ಯಕರ್ತರಿಂದ ಜೈಲ್‌ಬರೋ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 8:40 IST
Last Updated 20 ಡಿಸೆಂಬರ್ 2012, 8:40 IST

ಸಿಂಧನೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಪ್ರತಿರೋಧ ವ್ಯಕ್ತಪಡಿಸಿದ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಕಾರ್ಯಕರ್ತರು ಬುಧವಾರ ಜೈಲ್‌ಬರೋ ಚಳವಳಿ ನಡೆಸಿದರು.

ಭ್ರಷ್ಟಾಚಾರ ಪೆಡಂಭೂತ ಇಡೀ ಸಮಾಜವನ್ನು ಮಹಾಮಾರಿಯಂತೆ ಕಾಡುತ್ತಿದೆ. ಬೆಲೆ ಏರಿಕೆ ನಿಯಂತ್ರಣಕ್ಕಾಗಲಿ ಅಥವಾ ಭ್ರಷ್ಟಾಚಾರದ ನಿಯಂತ್ರಣಕ್ಕಾಗಲಿ ಕೇಂದ್ರ ಸರ್ಕಾರ ದೃಢವಾದ ಕ್ರಮಗಳನ್ನು ಕೈಗೊಂಡಿಲ್ಲ. ಲಾಭದಾಯಕವಾದ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಷೇರು ಬಂಡವಾಳವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿರುವುದು ಕಾರ್ಮಿಕರ ಹಾಗೂ ದೇಶದ ಹಿತಕ್ಕೆ ಮಾರಕ ಕ್ರಮವಾಗಿದೆ. ವರ್ಷವಿಡೀ ನಿರಂತರವಾಗಿ ಮಾಡಬೇಕಾದ ಕೆಲಸಗಳನ್ನು ಗುತ್ತಿಗೆ ಪದ್ಧತಿಯಲ್ಲಿ ನಿರ್ವಹಿಸುವ ಮೂಲಕ ಕಾರ್ಮಿಕರನ್ನು ತೀವ್ರ ಶೋಷಣೆಗೆ ಗುರಿ ಮಾಡಲಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆ ನಿಯಂತ್ರಣ, ಉದ್ಯೋಗ ಸೃಷ್ಟಿಗೆ ಪ್ಯಾಕೇಜ್ ಘೋಷಣೆ, ಕಾರ್ಮಿಕರ ಪರ ಕಾನೂನುಗಳ ಜಾರಿ, ಲಾಭದಾಯಕ ಸರ್ಕಾರದ ಉದ್ದಿಮೆಗಳ ಷೇರು ಮಾರಾಟಕ್ಕೆ ತಡೆ ಹಾಕುವುದು, ತಿಂಗಳಿಗೆ ಕನಿಷ್ಠ 10ಸಾವಿರ ಕಡಿಮೆ ಇಲ್ಲದಂತೆ ಶಾಸನಬದ್ಧ ಕನಿಷ್ಠ ಕೂಲಿ ಕಾಯ್ದೆಯನ್ನು ಜಾರಿ ಮಾಡುವುದು, ಬೋನಸ್, ಭವಿಷ್ಯನಿಧಿ ಪಾವತಿಗೆ ಇರುವ ಎಲ್ಲಾ ಮಿತಿ ಹಾಗೂ ಅರ್ಹತೆಗಳನ್ನು ತೆಗೆದುಹಾಕಿ ಗ್ರಾಚ್ಯುಟಿ ಮೊತ್ತವನ್ನು ಏರಿಸಬೇಕು. ಎಲ್ಲಾ ಕಾರ್ಮಿಕರಿಗೂ ನಿವೃತ್ತಿ ವೇತನ ನೀಡುವುದು, 45ದಿನಗಳೊಳಗಾಗಿ ಕಾರ್ಮಿಕ ಸಂಘಟನೆಗಳ ಕಡ್ಡಾಯ ನೊಂದಣಿ ಮತ್ತು ಐ.ಎಲ್.ಒ.ನ.87 ಹಾಗೂ 98ನೇ ನಿರ್ಣಯಗಳನ್ನು ದೃಢಿ ೀಕರಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರರ ಮೂಲಕ ಪ್ರಧಾನಮಂತ್ರಿಗಳಿಗೆ ವಿವಿಧ ಹಕ್ಕೋತ್ತಾಯಗಳನ್ನು ಈಡೇರಿಸಲು ಆಗ್ರಹಿಸಿ ಮನವಿಪತ್ರವನ್ನು ಸಲ್ಲಿಸಲಾಯಿತು.

ಜೈಲ್‌ಬರೋ ಚಳವಳಿಯಲ್ಲಿ ಭಾಗವಹಿಸಿದ್ದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ, ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ನರಸಿಂಹಪ್ಪ, ಕಾರ್ಮಿಕ ಮುಖಂಡರಾದ ವೆಂಕನಗೌಡ ಗದ್ರಟಗಿ, ಯಂಕಪ್ಪ ಕೆಂಗಲ್, ಶರಣಪ್ಪ ಗೊರೇಬಾಳ ಆಟೋ ಚಾಲಕರ ಸಂಘದ ಅಪ್ಪಣ್ಣ ಕಾಂಬಳೆ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಹನುಮಂತಪ್ಪ, ಗ್ರಾಮಾಂತರ ಹಮಾಲರ ಸಂಘದ ಚನ್ನಪ್ಪ, ಬಿಸಿಯೂಟ ನೌಕರರ ಸಂಘದ ರೇಣುಕಮ್ಮ ಸೇರಿದಂತೆ ಇನ್ನಿತರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.