ADVERTISEMENT

‘ಡೆಂಗಿ ತಡೆಗೆ ಜನರ ಸಹಕಾರ ಅಗತ್ಯ’

ವಿಶ್ವ ಡೆಂಗಿ ದಿನಾಚರಣೆ ನಿಮಿತ್ತ ಆರೋಗ್ಯ ಇಲಾಖೆಯಿಂದ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 27 ಮೇ 2018, 11:23 IST
Last Updated 27 ಮೇ 2018, 11:23 IST

ಲಿಂಗಸುಗೂರು: ‘ಡೆಂಗಿ ಜ್ವರದ ಬಗ್ಗೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಡೆಂಗಿ ತಡೆಗೆ  ಆರೋಗ್ಯ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು  ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ ಹೇಳಿದರು.

ವಿಶ್ವ ಡೆಂಗಿ ದಿನಾಚರಣೆ ನಿಮಿತ್ತ ಶನಿವಾರ ಆಯೋಜಿಸಿದ್ದ ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

‘ವ್ಯಕ್ತಿಯ ಮೈಮೇಲೆ ಕೆಂಪು ಗಾದರಿ (ಗಂದೆ), ಅತಿಯಾದ ಜ್ವರ, ಆಯಾಸ, ತೀವ್ರ ತಲೆನೋವು, ಸ್ನಾಯು, ಕೀಲು, ಕಣ್ಣು ನೋವು ಇತರೆ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರದಲ್ಲಿ  ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಕೋರಿದರು.

ADVERTISEMENT

ಹಿರಿಯ ವೈದ್ಯ ಡಾ.ರಾಜೇಂದ್ರಕುಮಾರ ಮನಗೂಳಿ ಮಾತನಾಡಿ, ‘ಡೆಂಗಿ ಸೊಳ್ಳೆಯಿಂದ ಬರುತ್ತದೆ. ಹೀಗಾಗಿ ನಾವು ವಾಸಿಸುವ ಸುತ್ತಮುತ್ತಲಿನ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿತಾಗದಂತೆ ಸ್ವಚ್ಛತೆ ಕಾಪಾಡಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು. ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಾಗೃತಿ ಜಾಥಾ: ವಿಶ್ವ ಡೆಂಗಿ ದಿನಾಚರಣೆ ನಿಮಿತ್ತ ಆರೋಗ್ಯ ಇಲಾಖೆ ಆಯೋಜಿಸಿದ್ದ ಜಾಗೃತ ಜಾಥಾಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರುದ್ರಗೌಡ ಚಾಲನೆ ನೀಡಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೆಂಗಿ ಜ್ವರ ಹರಡದಂತೆ ಕೈಗೊಳ್ಳಬಹುದಾದ ಮುಂಜಾಗ್ರತೆ ಕ್ರಮಗಳ ಕುರಿತು ಕರ ಪತ್ರ ಹಂಚಲಾಯಿತು. ಪರಿಸರ ಸ್ವಚ್ಛತೆ ಬಗ್ಗೆ ಮಾಹಿತಿ ನೀಡುವ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಷಿ, ವಿವಿಧ ಶಾಖೆಗಳ ಅಧಿಕಾರಿಗಳಾದ ಪ್ರಕಾಶ ಪಾಟೀಲ, ನಾಗೇಶ, ಅರ್ಜುನ, ರವಿಕುಮಾರ ಹೂಗಾರ, ಗೀತಾ, ಇಮಾಂಬಿ, ಜಯಶ್ರೀ, ಅಮರಮ್ಮ, ನಾಮದೇವ, ಶಿವಲೀಲಾ, ಜಗನ್ನಾಥ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.