ರಾಯಚೂರು: ಮಡೆಸ್ನಾನ, ಪಂಕ್ತಿ ಬೇಧ, ಜಾತಿ ತಾರತಮ್ಯ ವಿರೋಧಿಸಿ ಶನಿವಾರ ಭಾರತ ಕಮ್ಯೂನಿಸ್ಟ್ ಪಕ್ಷದ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಡಾ.ಅಂಬೇಡ್ಕರ್ ವೃತ್ತದಿಂದ ತಹಸೀಲದಾರ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.
ನಂತರ ತಹಸೀಲದಾರ ಕಚೇರಿಯ ಎದುರು ಧರಣಿ ನಡೆಸಿದರು. ಬಳಿಕ ಸರ್ಕಾರಕ್ಕೆ ತಹಸೀಲದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸ್ವಾತಂತ್ರ್ಯ ಗಳಿಸಿ 64 ವರ್ಷಗಳು ಕಳೆದರೂ ಅಮಾನವೀಯ. ಅಪಮಾನ. ಜಾತಿ ತಾರತಮ್ಯ, ಮಡೆಸ್ನಾನ, ಪಂಕ್ತಿ ಬೇಧ, ಅಸ್ಪೃಶ್ಯತೆ ನಿರಂತರವಾಗಿ ಮುಂದುವರಿದಿದೆ.
ದಲಿತರ ಮೇಲೆ ದೌರ್ಜನ್ಯ, ದಾಳಿ, ಬಹಿಷ್ಕಾರ ನಿರಂತರ ಮುಂದುವರಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರ ರಕ್ಷಣೆ, ಅಭಿವೃದ್ಧಿಗಾಗಿ ಕೋಟಿ ಹಣ ಖರ್ಚು ಮಾಡಿದ್ದರೂ ವಾಸ್ತವ ಸ್ಥಿತಿ ಗಮನಿಸಿದಾಗ ಸರ್ಕಾರದ ಹಣ ಪೋಲಾಗಿದೆ. ದಲಿತರು ಅಭಿವೃದ್ಧಿಗೊಂಡಿಲ್ಲ ಎಂದು ಹೇಳಿದರು.
ಮಡೆಸ್ನಾನ, ಪಂಕ್ತಿ ಬೇಧ, ಜಾತಿ ತಾರತಮ್ಯ, ಪದ್ಧತಿಯನ್ನು ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಒತ್ತಾಯಿಸಿ ಹಾಗೂ ದಲಿತರ ಏಳ್ಗೆಗಾಗಿ ಕೇಂದ್ರ ಶಾಸನ ಜಾರಿಗಾಗಿ ಭಾರತ ಕಮ್ಯೂನಿಸ್ಟ್ ಪಕ್ಷವು ಈ ಹೋರಾಟ ಆಯೋಜಿಸಿದೆ ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ಸಂಘಟನೆ ತಿಳಿಸಿದೆ.
ಸಂಘಟನೆ ಮುಖಂಡರಾದ ಡಿ.ಎಸ್ ಶರಣಬಸವ, ಕೆ.ಜಿ ವಿರೇಶ, ಎಚ್ ಪದ್ಮಾ, ವೀರಭದ್ರ, ವರಲಕ್ಷ್ಮೀ, ಅಂಜನಮ್ಮ, ರಂಗಪ್ಪ, ವೈ ಈರಣ್ಣ, ಪ್ರಭುಲಿಂಗ, ಸುಮಿತ್ರಮ್ಮ ಹಾಗೂ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.