ADVERTISEMENT

ನಾಡಹಬ್ಬ ಸಂಭ್ರಮ; ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 8:55 IST
Last Updated 7 ಅಕ್ಟೋಬರ್ 2011, 8:55 IST

ಲಿಂಗಸುಗೂರ: ನಾಡಹಬ್ಬವೆಂದೇ ಪ್ರಖ್ಯಾತಿ ಪಡೆದುಕೊಂಡಿರುವ ದಸರಾ ಹಬ್ಬದ ಸಡಗರ ಸಂಭ್ರಮ ತಾಲ್ಲೂಕಿನಾದ್ಯಂತ ಕಂಡು ಬಂದಿತು.

ಪಟ್ಟಣದ ನಗರೇಶ್ವರ ದೇವಸ್ಥಾನದಿಂದ ಅಲಂಕೃತಗೊಳಿಸಿದ ತೆರೆದ ವಾಹನದಲ್ಲಿ ಶ್ರೀದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಬನ್ನಿ ಮಹಂಕಾಳೆ ಕಟ್ಟೆವರೆಗೆ ಭವ್ಯ ಮೆರವಣಿಗೆ ನಡೆಸಿರುವುದು ಪಟ್ಟಣದ ಜನತೆಯಲ್ಲಿ ವಿಶೇಷ ಕಳೆ ಹುಟ್ಟಿಸಿತ್ತು.

ನಗರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವಿಯ ಮೂರ್ತಿಯನ್ನು ವಾಹನದಲ್ಲಿ ಪ್ರತಿಷ್ಠಾಪಿಸಿ ಜಯಘೋಷಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಪಟ್ಟಣದ ಮುನ್ನೂರುವಾಡಿ, ಹನುಮಾನ ವೃತ್ತ, ಮೇನ್ ಬಜಾರ, ಪ್ರವಾಸಿ ಮಂದಿರದ ಮುಖ್ಯ ರಸ್ತೆ ಮೂಲಕ ಬನ್ನಿ ಮಹಂಕಾಳೆ ಕಟ್ಟೆಗೆ ತೆರಳಲಾಯಿತು. ದಾರಿಯುದ್ದಕ್ಕೂ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದ್ದವು.

ಬನ್ನಿಮಹಾಂಕಾಳೆಗೆ ಪೂಜೆ ಸಲ್ಲಿಸುತ್ತಿದ್ದಂತೆ ಹಿಂದು, ಮುಸ್ಲಿಂ, ಕ್ರೈಸ್ತರಾದಿಯಾಗಿ ಪರಸ್ಪರ ಬನ್ನಿ ಹಂಚಿಕೊಂಡು ಬಂಗಾರವಾಗಿ ಬದುಕೋಣ ಎಂಬ ಸಂದೇಶ ನೀಡಿದರು. ಜಾತಿ, ಮತ, ಪಂಥಗಳನ್ನು ದೂರವಿಟ್ಟು ನಾವುಗಳೆಲ್ಲಾ ಸಹೋದರತ್ವ ಭಾವನೆ ಮೈಗೂಡಿಸಿಕೊಳ್ಳೋಣ ಎಂದು ಶಾಸಕ ಮಾನಪ್ಪ ವಜ್ಜಲ ನೆರೆದ ಜನತೆಗೆ ಬನ್ನಿ ಕೊಡು ತೆಗೆದುಕೊಳ್ಳುತ್ತ ಸಂದೇಶ ನೀಡಿದರು.

ಹಿರಿಯರಾದ ಡಾ. ಎಲ್.ಎನ್. ನಡುವಿನಮನಿ, ಎಂ.ಶ್ರೀನಿವಾಸರೆಡ್ಡಿ, ಮಲ್ಲಿಕಾರ್ಜುನ ವಾರದ, ಮಂಜುನಾಥ ಕಾಮಿನ್, ಡಾ. ಶ್ರೀನಿವಾಸ ಕನಕಗಿರಿ, ವಿರೇಶ ಐದನಾಳ, ಶಿವಾನಂದ ಐದನಾಳ, ಎಚ್.ಬಿ. ಮುರಾರಿ, ರಾಮು ಜೋಷಿ, ಪ್ರಾಣೇಶ ಜೋಷಿ, ಮಾನಪ್ಪ ಬಡಿಗೇರ, ರಮೇಶ ಖಂಡೇಲವಾಲ, ಡಾ.ಶರಣಗೌಡ, ಸಂಜೀವ ಫೂಲಭಾವಿ, ಜಂಗಮಮೂರ್ತಿ, ಸಿದ್ಧ ಬಡಿಗೇರ, ವಿಶ್ವನಾಥ, ಚೆನ್ನಬಸವ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.