ADVERTISEMENT

ನಾಲ್ಕು ಮಹಿಳೆಯರು ಸೇರಿ ಐವರ ಸಾವು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 11:17 IST
Last Updated 30 ನವೆಂಬರ್ 2017, 11:17 IST
ಅಪಘಾತದಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.
ಅಪಘಾತದಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.   

ರಾಯಚೂರು: ಜಿಲ್ಲೆಯ ಎರಡು ಕಡೆಗಳಲ್ಲಿ ಟ್ರ್ಯಾಕ್ಟರ್ ಟ್ರಾಲಿ ಮಗುಚಿ, ನಾಲ್ಕು ಮಹಿಳೆಯರು ಸೇರಿ ಐದು ಮಂದಿ ಮೃತಪಟ್ಟಿದ್ದಾರೆ. 31 ಮಂದಿ ಗಾಯಗೊಂಡಿದ್ದಾರೆ.

ಮಸ್ಕಿ ಸಮೀಪದ ಮೆದಕಿನಾಳ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್‍ಗೆ ಸರ್ಕಾರಿ ಬಸ್ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, 14 ಮಹಿಳೆಯರು, ನಾಲ್ವರು ಪುರುಷರು ಗಾಯಗೊಂಡಿದ್ದಾರೆ.

ಲಿಂಗಸುಗೂರು ತಾಲ್ಲೂಕು ಮುದಗಲ್ ಪಟ್ಟಣದ ಮಲ್ಲಮ್ಮ (40) ಮತ್ತು ಹುಲಗಮ್ಮ (45) ಮೃತಪಟ್ಟವರು. ಗಾಯಗೊಂಡವರನ್ನು ಮುದಗಲ್, ಮಸ್ಕಿ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿರುವ ನಾಲ್ಕು ಜನ ಮಹಿಳೆಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸುಗೂರು ಮತ್ತು ಸಿಂಧನೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ADVERTISEMENT

ಗ್ರಾಮದ ಬಳಿ ರಸ್ತೆ ತಿರುವಿನಲ್ಲಿ ಎದುರಿಗೆ ಬಂದ ಬಸ್ ಟ್ರಾಲಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಟ್ರ್ಯಾಕ್ಟರ್‌ ಟ್ರಾಲಿ ಕಳಚಿ ಮಗುಚಿದ್ದರಿಂದ ಟ್ರ್ಯಾಕ್ಟರ್‍ನಲ್ಲಿದ್ದ 16 ಮಹಿಳೆಯರು ಸೇರಿ 20 ಜನರೆಲ್ಲರೂ ಕೆಳಗೆ ಬಿದ್ದಿದ್ದಾರೆ. ಬಸ್ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.

ಮುದಗಲ್‍ನಿಂದ ಮಸ್ಕಿಗೆ ಬಸ್ ಬರುತ್ತಿತ್ತು. ಸಿಂಧನೂರಿನಲ್ಲಿ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇವರು ಮುದಗಲ್‍ಗೆ ಟ್ರ್ಯಾಕ್ಟರ್‌ನಲ್ಲಿ ವಾಪಸಾಗುತ್ತಿದ್ದರು.

ರಾತ್ರಿ 8.30 ಗಂಟೆಗೆ ಅಪಘಾತ ನಡೆದಿದೆ. ಗ್ರಾಮದ ಜನರು ನೆರವಿಗೆ ಧಾವಿಸಿ, ರೋಗಿಗಳಿಗೆ ಆಂಬುಲೆನ್ಸ್ ಹತ್ತಲು ನೆರವಾದರು. ಬಸ್ ಚಾಲಕ ಪರಾರಿಯಾಗಿದ್ದು, ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಂಧನೂರು ತಾಲ್ಲೂಕು ಸೋಮಲಾಪುರ ಬಳಿ ಟ್ರ್ಯಾಕ್ಟರ್ ಟ್ರಾಲಿ ಉರುಳಿಬಿದ್ದು, ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟಿದ್ದಾರೆ.

ಸೋಮಲಾಪುರದ ಅಯ್ಯಮ್ಮ (60), ಅಂಬಮ್ಮ (55), ನಿಂಗಪ್ಪ ದುರ್ಗಪ್ಪ ಕಟಿಗೇರ (32) ಮೃತಪಟ್ಟವರು. ಐದು ಜನ ಮಹಿಳೆಯರು ಸೇರಿ 13 ಮಂದಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಸಿಂಧನೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕು ಉಪ್ಪಾರಹೊಸಳ್ಳಿ ಗ್ರಾಮಕ್ಕೆ ಅಂತ್ಯಸಂಸ್ಕಾರಕ್ಕಾಗಿ ಟ್ರ್ಯಾಕ್ಟರ್‌ನಲ್ಲಿ ಹೋಗಿ ವಾಪಸ್ ಬರುತ್ತಿದ್ದಾಗ ಟ್ರಾಲಿ ಉರುಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.