ADVERTISEMENT

ನಾಳೆ ಮಧ್ಯಾಹ್ನ ಫಲಿತಾಂಶ: ಡಿಸಿ

ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 15 ಮೇ 2014, 5:46 IST
Last Updated 15 ಮೇ 2014, 5:46 IST
ರಾಯಚೂರಿನ ಎಸ್‌.ಆರ್.ಪಿ.ಎಸ್.ಪಿಯು ಕಾಲೇಜಿನಲ್ಲಿ ಬುಧವಾರ ಚುನಾವಣಾಧಿಕಾರಿ ಎಸ್.ಎನ್.ನಾಗರಾಜು ಅವರು ಭೇಟಿ ನೀಡಿ ಶುಕ್ರವಾರ ನಡೆಯಲಿರುವ ಲೋಕಸಭಾ ಚುನಾವಣೆ ಮತ ಎಣಿಕೆ ಸಿದ್ಧತೆಗಳನ್ನು ಪರಿಶೀಲಿಸಿದಾಗ ಉಪವಿಭಾಗಾಧಿಕಾರಿ ಎಂ.ಪಿ.ಮಾರುತಿ ವಿವರಣೆ ನೀಡಿದರು .
ರಾಯಚೂರಿನ ಎಸ್‌.ಆರ್.ಪಿ.ಎಸ್.ಪಿಯು ಕಾಲೇಜಿನಲ್ಲಿ ಬುಧವಾರ ಚುನಾವಣಾಧಿಕಾರಿ ಎಸ್.ಎನ್.ನಾಗರಾಜು ಅವರು ಭೇಟಿ ನೀಡಿ ಶುಕ್ರವಾರ ನಡೆಯಲಿರುವ ಲೋಕಸಭಾ ಚುನಾವಣೆ ಮತ ಎಣಿಕೆ ಸಿದ್ಧತೆಗಳನ್ನು ಪರಿಶೀಲಿಸಿದಾಗ ಉಪವಿಭಾಗಾಧಿಕಾರಿ ಎಂ.ಪಿ.ಮಾರುತಿ ವಿವರಣೆ ನೀಡಿದರು .   

ರಾಯಚೂರು: ನಗರದ ಎಲ್‌ವಿಡಿ ಕಾಲೇಜು ಹಾಗೂ ಎಸ್ಆರ್‌­ಪಿಎಸ್ ಪಿಯು ಕಾಲೇಜಿನ ಒಟ್ಟು 8 ಕೊಠಡಿಯಲ್ಲಿ ರಾಯಚೂರು ಲೋಕ­ಸಭಾ ಕ್ಷೇತ್ರದ ಮತ ಎಣಿಕೆಯು ಮೇ 16ರಂದು ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕೆ ಕಾರ್ಯಕ್ಕೆ 424 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಚುನಾವಣಾ­ಧಿಕಾರಿ ಎಸ್.ಎನ್.ನಾಗರಾಜು ಹೇಳಿದರು.

ಮಧ್ಯಾಹ್ನ 1 ಗಂಟೆಗೆ ಮತ ಎಣಿಕೆ ಪೂರ್ಣ­ಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಜ­ಯೋತ್ಸವ ಮೆರವಣಿಗೆ ನಿಷೇಧ ಮಾಡಲಾಗಿದೆ.  ಮೇ 15ರ ಮಧ್ಯರಾತ್ರಿಯಿಂದ ಮೇ 16ರ ಮಧ್ಯರಾತ್ರಿವರೆಗೆ ಮದ್ಯಪಾನ ಮಾರಾಟ ನಿಷೇಧ ಮಾಡಲಾಗಿದೆ ಎಂದು ತಿಳಿಸಿದರು.

ಬುಧವಾರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಸಿದ್ಧತೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮತ ಎಣಿಕೆಯು ಒಟ್ಟು 17 ಸುತ್ತಿನಲ್ಲಿ ನಡೆ­ಯ­ಲಿದೆ. 5 ಜನ ಸಹಾಯಕ ಚುನಾವಣಾಧಿ­ಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ಮತ ಎಣಿಕೆ ನಡೆಯುವ 8 ಕೊಠಡಿಗೆ ತಲಾ 14 ಟೇಬಲ್ ಅಳವಡಿಸಿದ್ದು, ಒಟ್ಟು 112 ಟೇಬಲ್ ಅಳವಡಿಸಲಾಗಿದೆ ಎಂದು ತಿಳಿಸಿದರು.

ಮತ ಎಣಿಕೆ ಮೇಲ್ವಿಚಾರಕರು: ಒಟ್ಟು 112 ಮತ ಎಣಿಕೆ ಮೇಲ್ವಿಚಾರಕರನ್ನು ನೇಮಿಸಲಾಗಿದೆ. 112 ಸಹಾಯಕ ಮತ ಎಣಿಕೆ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. 133 ಮೈಕ್ರೋ ಆಬ್ಸರ್‌­ವರ್ಸ್ ನೇಮಿಸಲಾಗಿದೆ. ಕಾಯ್ದಿರಿಸಿದ ಸಿಬ್ಬಂದಿ ಸೇರಿದಂತೆ ಒಟ್ಟು 424 ಸಿಬ್ಬಂದಿಯನ್ನು ಮತ ಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಮತ ಎಣಿಕೆ ಕಾರ್ಯ ಸರಿಯಾಗಿ ನಡೆಯುತ್ತಿ­ದೆಯೇ ಎಂಬುದನ್ನು ಗಮನಿಸಲು ಮತ ಎಣಿಕೆಯ ಪ್ರತಿ ಟೇಬಲ್‌ಗೂ ಕೇಂದ್ರ ಸರ್ಕಾರದ ಸಿಬ್ಬಂದಿ­ಯನ್ನೇ ನಿಯೋಜಿಸಲಾಗಿದೆ. ಇವರೇ ಗಮನಿಸಿ ಚುನಾವಣಾ ವೀಕ್ಷಕರಿಗೆ ಮಾಹಿತಿ ರವಾನಿಸ­ಲಿದ್ದಾರೆ ಎಂದು ವಿವರಿಸಿದರು.

ಅಂಚೆ ಮತ ಎಣಿಕೆಗೆ ಪ್ರತ್ಯೇಕ ಕೊಠಡಿ: ಅಂಚೆ ಮತ ಎಣಿಕೆಗೆ ಪ್ರತ್ಯೇಕ ಕೊಠಡಿಯನ್ನು ನಿಗದಿ­ಪಡಿಸ­ಲಾಗಿದೆ. ಇದಕ್ಕೂ ಪ್ರತ್ಯೇಕ ಸಹಾಯಕ ಚುನಾವಣಾಧಿಕಾರಿ (ಎ.ಆರ್.ಒ) ನೇಮಿಸ­ಲಾಗಿದೆ ಎಂದು ತಿಳಿಸಿದರು.

ಬಣ್ಣದ ಗುರುತಿನ ಚೀಟಿ ವಿತರಣೆ: ಮತ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆಯಲು ಎಲ್ಲ ರೀತಿಯ ಬಂದೋಬಸ್ತ್ ಕ್ರಮ ಕೈಗೊಳ್ಳಲಾಗಿದೆ. ಮತ ಎಣಿಕೆಗೆ ನಿಯೋಜನೆಗೊಂಡ ಏಜೆಂಟರು, ಸಿಬ್ಬಂದಿ ನಿರ್ದಿಷ್ಠ ಸ್ಥಳ, ಕಾರ್ಯ ಸ್ಥಳ ಬಿಟ್ಟು ಅತ್ತಿಂದಿತ್ತ ಇತ್ತಿಂದತ್ತ ಹೋಗುವುದನ್ನು ನಿರ್ಬಂಧಿ­ಸ­ಲಾಗಿದೆ. 

ನಿರ್ದಿಷ್ಟ ಗುರುತಿನ ಚೀಟಿಯನ್ನು ವಿತರಣೆ ಮಾಡಲಾಗುತ್ತಿದೆ. ಮತ ಎಣಿಕೆ ಏಜೆಂಟ್‌­ಗಳ ಗುರುತಿನ ಚೀಟಿಗೆ ‘ಪಂಚ್‌’ ಮಾಡ­ಲಾಗುತ್ತದೆ. ಒಂದು ಬಾರಿ ಪಂಚ್ ಆದ ಮೇಲೆ  ಹೊರಗಡೆ ಹೋಗಿ ಮತ್ತೊಂದು ಬಾರಿ ಇದೇ ಗುರುತಿನ ಚೀಟಿ ಹಿಡಿದು, ಭಾವಚಿತ್ರ ಕಿತ್ತು ಹಾಕಿ ಒಳಬರುವುದಕ್ಕೆ ಆಸ್ಪದವೇ ಇರುವುದಿಲ್ಲ ಎಂದು ಹೇಳಿದರು.

ಮತ ಎಣಿಕೆ ಕೊಠಡಿಯಲ್ಲಿಯೇ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯಕ್ಕೆ ಹೋಗುವಾಗ ಮಾತ್ರ ಲಿಖಿತವಾಗಿ ಮಾಹಿತಿ ನೀಡಿ ಅಧಿಕಾರಿಗೆ ತಿಳಿಸಿ ಹೋಗಿ ಬರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಅಭ್ಯರ್ಥಿಗಳ ಮತ ಎಣಿಕೆ ಏಜೆಂಟ್‌ಗಳಿಗೆ ವಿವರ: ಮತ ಎಣಿಕೆ  ಪೂರ್ಣ ವಿವರ ಪಟ್ಟಿಯನ್ನು  ಅಭ್ಯರ್ಥಿ­ಗಳ ಮತ ಎಣಿಕೆ ಏಜೆಂಟ್‌ಗಳಿಗೆ ವಿವರ ಕೊಡಲು ಆಯೋಗ ಸೂಚನೆ ನೀಡಿದೆ. ಆ ಪ್ರಕಾರ ವಿವರ ಒದಗಿಸಲು 4 ಜನ ಅಧಿಕಾರಿಗಳನ್ನು ನಿಯೋಜಿಸ­ಲಾಗಿದೆ ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಹಿಟ್ನಾಳ, ಉಪ ವಿಭಾಗಾಧಿಕಾರಿ ಎಂ.ಪಿ ಮಾರುತಿ ಹಾಗೂ ಇತರ ಅಧಿಕಾರಿಗಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.