ತಾವರಗೇರಾ: ಸಮೀಪದ ಅಡವಿಭಾವಿ ತಾಂಡಾದಲ್ಲಿ ಕುಡಿಯುವ ನೀರಿನ ಅಭಾವ ತಲೆದೂರಿದ್ದು, ಪ್ರತಿದಿನ ಹತ್ತಿರದ ತೋಟಗಳ ಮೊರೆ ಹೋಗಬೇಕಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಭಾವಿ ಗ್ರಾಮದಲ್ಲಿ 330 ಕುಟುಂಬಗಳು ಇದ್ದು 900ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ಕೆಲವು ದಿನಗಳಿಂದ ಕುಡಿಯುವ ನೀರಿನ ಅಭಾವ ತಲೆದೋರಿದೆ. ಗ್ರಾಮದಲ್ಲಿ ಅಂತರ್ಜಲ ಮಟ್ಟ ಕುಸಿದ ಕಾರಣ ಗ್ರಾಮ ಪಂಚಾಯಿತಿಯು ಈಚೆಗೆ ಕೊರೆಸಿದ ಬೋರ್ವೆಲ್ಗಳಲ್ಲಿ ಸಾಕಷ್ಟು ಪ್ರಮಾಣದ ನೀರು ಬರುತ್ತಿಲ್ಲ. ಇದರಿಂದ ಪ್ರತಿದಿನ ನೀರಿಗಾಗಿ ಸಮೀಪದ ರೈತರ ತೋಟಗಳಿಗೆ ಅಲೆದಾಡುವ ಪರಿಸ್ಥಿತಿ ಮುಂದುವರೆದಿದೆ.
ಗ್ರಾಮದಲ್ಲಿ ಪ್ಲೋರೈಡ್ ನೀರು ಇರು ವುದರಿಂದ ಕೈಕಾಲು ನೋವು ಮತ್ತಿತ್ತರ ಅನಾರೋಗ್ಯಕ್ಕೆ ಕಾರಣವಾಗಿದೆ. ಸರ್ಕಾರ ಗ್ರಾಮದಲ್ಲಿ ನೀರು ಶುದ್ಧಿಕರಣ ಘಟಕ ಮಂಜೂರು ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
‘ಮಾರ್ಚ್ 1ರಂದು ಗ್ರಾಮದ ಆರಾಧ್ಯದೈವ ಕೊಳ್ಳದ ಅಮರೇಶ್ವರ ಜಾತ್ರಾ ಮಹೋತ್ಸವ ನಡೆಯಲಿದ್ದು, 2ರಂದು ಸಾಮೂಹಿಕ ವಿವಾಹಗಳು ನಡೆಯಲಿವೆ. ಭಕ್ತರಿಗೆ ನೀರಿನ ಸೌಲಭ್ಯ ಒದಗಿಸಬೇಕು’ ಎಂದು ಗ್ರಾ.ಪಂಸದಸ್ಯ ಆದಪ್ಪ ಮಾಲಿ ಪಾಟೀಲ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.