ADVERTISEMENT

ನೀರಿಗಾಗಿ ಕಚೇರಿಗೆ ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:36 IST
Last Updated 8 ಡಿಸೆಂಬರ್ 2012, 6:36 IST

ಸಿರವಾರ (ಕವಿತಾಳ): ತುಂಗಭದ್ರಾ ಎಡದಂಡೆ ಕಾಲುವೆ ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಒದಗಿಸುವಂತೆ ಆಗ್ರಹಿಸಿ ನೂರಾರು ರೈತರು ಪಟ್ಟಣದ ಜಲ ಸಂಪನ್ಮೂಲ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕಚೇರಿಗೆ ಭೇಟಿ ನೀಡಿದ್ದ ಯರಮರಸ್ ವಿಭಾಗದ ಅಧೀಕ್ಷಕ ಎಂಜಿನೀಯರ್ ಅವರೊಂದಿಗೆ ವಾಗ್ವಾದ ಮಾಡಿದ ರೈತರು ಕೆಳ ಭಾಗಕ್ಕೆ ಬಿಡುತ್ತಿರುವ ನೀರಿನ ಪ್ರಮಾಣ ಮತ್ತು ಅವಧಿ ಹಾಗೂ ಯಾವ ಬೆಳೆಗೆ ನೀರು ಬಿಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಜಲಾಶಯದಲ್ಲಿನ ನೀರು ಕುಡಿಯಲು ಬಳಕೆಯಾಗುತ್ತದೆ ಬೆಳೆಗಳ ಪರಿಸ್ಥಿತಿ ಹೇಗೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ ಜೇಗರಕಲ್ ಆತಂಕ ವ್ಯಕ್ತಪಡಿಸಿದರು.

ಚುನಾವಣೆ ಸಮೀಪಿಸುತ್ತಿದ್ದು ರೈತರನ್ನು ಎದುರು ಹಾಕಿಕೊಳ್ಳಲಾಗದ ಜನಪ್ರತಿನಿಧಿಗಳು  ನೀರು ಬಿಡುವುದಾಗಿ ರೈತರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. 2400 ಕ್ಯೂಸೆಕ್ಸ್ ನೀರು ಬಿಟ್ಟರೂ ಸಿರವಾರ ವಿಭಾಗದಲ್ಲಿ 0.5ಅಡಿ ನೀರು ಹರಿಯುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಮೈಲ್ 69ರಲ್ಲಿ 1000 ಕ್ಯೂಸೆಕ್ಸ್ ನೀರು ಇರುತ್ತದೆ ಮತ್ತು 5.1ಅಡಿ ಗೇಜ್ ಕಾಯ್ದುಕೊಳ್ಳುವುದಾಗಿ ತಿಳಿಸಿದ ಅಧೀಕ್ಷಕ ಎಂಜಿನಿಯರ್ ಜನಾರ್ಧನ ಆತಂಕಪಡಬೇಕಿಲ್ಲ ಎಂದರು. ಮಲ್ಲಿಕಾರ್ಜುನ ಬಲ್ಲಟಗಿ, ರಾಜಪ್ಪ ಹೊನ್ನಟಗಿ, ಇಇ ವೀರಸಿಂಗ್ ನಾಯ್ಕ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.