ದೇವದುರ್ಗ: ತಾಲ್ಲೂಕಿನ ಕೊಪ್ಪರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಾಮನಾಳ ಗ್ರಾಮದಲ್ಲಿ ಕುಡಿಯುವ ನೀರಿಗೆ ಇನ್ನಿಲ್ಲದ ತೊಂದರೆ ಎದುರಾಗಿದ್ದು, ಯಾರೊಬ್ಬರೂ ಇತ್ತಕಡೆ ಸುಳಿದು ಪರಿಹಾರ ಕಂಡುಕೊಳ್ಳದೆ ಇರುವುದು ಕಂಡು ಬಂದಿದೆ.
ಸದರಿ ಗ್ರಾಮಕ್ಕೆ ಕೃಷ್ಣಾ ನದಿ ಪಕ್ಕದಲ್ಲಿ ಇದ್ದರೂ ಸಂಬಂಧಿಸಿದ ಆಡಳಿತ ವ್ಯವಸ್ಥೆ ಇತ್ತಕಡೆ ಸುಳಿಯದೆ ಇರುವುದರಿಂದ ಇಡೀ ಗ್ರಾಮವೇ ಹನಿ ನೀರಿಗಾಗಿ ತೊಂದರೆ ಪಡುವಂತಾಗಿದೆ. ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿಯೇ ವರ್ಷಪೂರ್ತಿ ಕೋಟಿಗಟ್ಟಲೇ ಹಣ ಖರ್ಚು ಮಾಡುವುದು ಸಂಪ್ರದಾಯವಾಗಿದ್ದರೂ ರಾಮನಾಳ ಗ್ರಾಮಕ್ಕೆ ಕನಿಷ್ಟ ಸೌಜನ್ಯಕ್ಕಾದರೂ ನೀರಿನ ವ್ಯವಸ್ಥೆಗೆ ತಾಲ್ಲೂಕು ಆಡಳಿತ ಅಥವಾ ಸಂಬಂಧಿಸಿದ ಗ್ರಾಮ ಪಂಚಾಯಿತಿ ಮುಂದಾಗದೆ ಇರುವುದು ದುರದೃಷ್ಟ ಎನ್ನುವಂತಿದೆ.
ಹಣ ಖರ್ಚು: ಬರಗಾಲ ಪ್ರದೇಶ ಘೋಷಣೆ ಅಡಿಯಲ್ಲಿ ಮೊದಲ ಆದ್ಯತೆಯಲ್ಲಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗದಂತೆ ಬೋರ್ವೆಲ್ಗಳ ದುರಸ್ತಿಗಾಗಿ ಸುಮಾರು 20 ಲಕ್ಷ ರೂಪಾಯಿಯನ್ನು ಜಿಲ್ಲಾ ಪಂಚಾಯಿತಿಗೆ ನೀಡಲಾಗಿದೆ.
ಸದರಿ ಹಣವನ್ನು 52 ಗ್ರಾಮಗಳಲ್ಲಿ ಈಗಾಗಲೇ ಹಣವನ್ನು ಖರ್ಚು ಮಾಡಲಾಗಿದೆ ಎಂದು ಜಿಪಂ ಸಹಾಯಕ ಎಂಜಿನಿಯರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ. ಆಗಾದರೆ ಇಡೀ ರಾಮನಾಳ ಗ್ರಾಮಕ್ಕೆ ಒಂದೇ ಬೋರ್ವೆಲ್ ಇರುವುದು ಯಾವ ಲೆಕ್ಕ. ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಇದ್ದರೂ ಅದಕ್ಕೆ ತಕ್ಕಂತೆ ಕುಡಿಯುವ ನೀರಿಗೆ ವ್ಯವಸ್ಥೆ ಇಲ್ಲ.
ಒಂದೇ ಬೋರ್ವೆಲ್: ಇಡೀ ರಾಮನಾಳ ಗ್ರಾಮಕ್ಕೆ ಒಂದೇ ಬೋರ್ವೆಲ್ ಮಾತ್ರ ಇದ್ದು, ಇಡೀ ಗ್ರಾಮದ ಜನತೆಗೆ ನೀರಿನ ದಾಹ ತೀರಿಸಬೇಕಾಗಿದೆ. ಕಳೆದ ಎರಡು ವರ್ಷದಿಂದ ಸರಿಯಾಗಿ ಮಳೆ ಬಾರದ ಕಾರಣ ಅಂತರ್ಜಲ ಕುಸಿದಿದೆ.
ಜನ, ಜಾನುವಾರಗಳಿಗೆ ಇದೇ ಬೋರ್ವೆಲ್ ನೀರೆ ಅನಿವಾರ್ಯವಾಗಿರುವುದರಿಂದ ಬೋರ್ವೆಲ್ನಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಕಾರಣಕ್ಕಾಗಿಯೇ ಕಾಯ್ದು ಕುಳಿತು ನೀರು ಪಡೆಯಬೇಕಾಗಿದೆ. ಗ್ರಾಮದಲ್ಲಿ ಶೇ 95ರಷ್ಟು ರೈತಾಪಿ ಕುಟುಂಬಗಳು ಇದ್ದರೆ ಇತರರು ಮುಂಜಾನೆಯಿಂದ ಸಂಜೆವರಿಗೂ ಕೂಲಿ ಕೆಲಸಕ್ಕೆ ಹೋಗಿ ಮನೆಗೆ ಬಂದರೆ ನೀರಿನ ತಾಪತ್ರೆಯಿಂದ ಬೇಸೆತ್ತು ಹೋಗಿದ್ದಾರೆ. ಇನ್ನೂ ಜಾನುವಾರಗಳಿಗೆ ಕುಡಿಯಲು ನೀರು ಇಲ್ಲದ ಕಾರಣ ನೀರು ಹುಡುಕಿಕೊಂಡು ಹೋಗಬೇಕಾದ ಪರಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.