ADVERTISEMENT

ಪಿಡಿಒ ವರ್ಗಾವಣೆಗೆ ವಿರೋಧ: ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 10:35 IST
Last Updated 3 ಆಗಸ್ಟ್ 2013, 10:35 IST

ಮಸ್ಕಿ: ಇಲ್ಲಿನ ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜ್ಯೋತಿ ವರ್ಗಾವಣೆ ರದ್ದು ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ಶಾಸಕ ಪ್ರತಾಪಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮರಮ್ಮ ನೇತೃತ್ವದಲ್ಲಿ ಪ್ರವಾಸಿ ಮಂದಿರದಿಂದ ಶಾಸಕರ ಕಚೇರಿ ತನಕ ಮೆರವಣಿಗೆ ಬಂದ ಗ್ರಾಮಸ್ಥರು, ಶಾಸಕರ ಕಚೇರಿ ಮುಂದೆ ಕೆಲ ಹೊತ್ತು ಧರಣಿ ಕುಳಿತರು. ಬಳಿಕ ಶಾಸಕರನ್ನು ಭೇಟಿಯಾಗಿ,`ರಾಜಕೀಯ ಒತ್ತಡದಿಂದ ಜ್ಯೋತಿ ಅವರ ವರ್ಗಾವಣೆ ಮಾಡಲಾಗಿದೆ. ಇದನ್ನು ತಡೆಹಿಡಿಯಬೇಕು. ಇಲ್ಲದಿದ್ದಲ್ಲಿ ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು' ಎಂದರು.  

ಮನವಿ ಸ್ವೀಕರಿಸಿದ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, `ಇದು ಸಾಮಾನ್ಯ ವರ್ಗಾವಣೆ. ರಾಜಕೀಯ ಒತ್ತಡದಿಂದ  ನಡೆದಿಲ್ಲ. ಅಲ್ಲದೇ ಇದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಂಬಂಧ ಪಟ್ಟ ವಿಚಾರ' ಎಂದರು.

`ಪಂಚಾಯಿತಿಗೆ ಯಾವುದೇ ಅಧಿಕಾರಿ ಬಂದರೂ ಅವರಿಂದ ಉತ್ತಮ ಕೆಲಸ ತೆಗೆಯಿಸುವುದು ಅಧ್ಯಕ್ಷರ ಹಾಗೂ ಸದಸ್ಯರಿಗೆ ಸೇರಿದ್ದು' ಎಂದ ಶಾಸಕ ಪ್ರತಾಪಗೌಡ ಪಾಟೀಲ, `ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದರು.

ಉಪಾಧ್ಯಕ್ಷ ವಿರೂಪಣ್ಣ ಹಾಗೂ  ಪಂಚಾಯಿತಿ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಿಎಸ್‌ಐ ಗುರುರಾಜ ಕಟ್ಟಿಮನಿ ಬಂದೋಬಸ್ತ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.