ADVERTISEMENT

`ಪೊಲೀಸ್ ಕಲ್ಯಾಣ ಯೋಜನೆ ಅವಶ್ಯ'

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 6:26 IST
Last Updated 3 ಏಪ್ರಿಲ್ 2013, 6:26 IST

ರಾಯಚೂರು: ಪೊಲೀಸ್ ಸಿಬ್ಬಂದಿಗೆ ಈ ದಿನಗಳಲ್ಲಿ ಕಾರ್ಯದ ಒತ್ತಡ ಹೆಚ್ಚಾಗಿದ್ದು, ಅವರ ಆರೋಗ್ಯ ಸಂರಕ್ಷಣೆಗೆ ಮತ್ತು ಉತ್ತಮ ಜೀವನಕ್ಕೆ ಹೆಚ್ಚಿನ ಸೌಲಭ್ಯಗಳು ದೊರಕಬೇಕಿದೆ. ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಕಲ್ಯಾಣಕ್ಕೆ ಇನ್ನೂ ಉಪಯುಕ್ತ ಯೋಜನೆಗಳು ಅಗತ್ಯವಾಗಿದೆ ಎಂದು ನಿವೃತ್ತ ಪೊಲೀಸ್ ಉಪ ಅಧೀಕ್ಷಕ (ಡಿಎಸ್ಪಿ) ವಿ.ಬಿ ಬೆಳವಡಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶಾಂತಿ ಸುವ್ಯವಸ್ಥೆ ಸಮಾಜಕ್ಕೆ ಪೊಲೀಸ್ ವ್ಯವಸ್ಥೆ ಸದೃಢವಾಗಿರಬೇಕು. ಪೊಲೀಸರು ದಕ್ಷತೆಯಿಂದ ಉತ್ತಮ ರೀತಿ ಕಾರ್ಯನಿರ್ವಹಿಸಲು ಅವರ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ನಿಗಾ ಅವಶ್ಯವಾಗಿದೆ ಎಂದರು.

ನಿವೃತ್ತ ಸಶಸ್ತ್ರ ಆರಕ್ಷಕ ಉಪ ನಿರೀಕ್ಷಕ ಅಧಿಕಾರಿ ಡಿ. ಪ್ರಕಾಶ ಮಾತನಾಡಿ, ಪೊಲೀಸ್ ಸಿಬ್ಬಂದಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಾಯ, ಪೊಲೀಸ್ ವಸತಿ ಶಾಲೆ, ಆರೋಗ್ಯ ಭಾಗ್ಯ ಯೋಜನೆಯಂಥ ಉಪಯುಕ್ತ ಯೋಜನೆಗಳು ನಿವೃತ್ತ ಪೊಲೀಸರಿಗೆ ದೊರಕಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಉಜ್ವಲ ಘೋಷ್ ಮಾತನಾಡಿ, ಮೂಲಸೌಕರ್ಯ ಹಾಗೂ ಆರೋಗ್ಯ ಸೇವೆ ದೊರಕಿಸುವುದು ಆದ್ಯತೆಯಾಗಬೇಕು.ಈ ದಿಶೆಯಲ್ಲಿ ಜಿಲ್ಲಾಡಳಿದ ಸಂಪೂರ್ಣ ಸಹಕಾರ ಇರಲಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಪೊಲೀಸ್ ವಿವಿಧ ತಂಡಗಳಿಂದ ಆಕರ್ಷಕ ಕವಾಯತು ನಡೆಯಿತು. ಪೊಲೀಸ್‌ಧ್ವಜ ದಿನಾಚರಣೆ ಅಂಗವಾಗಿ ಪೊಲೀಸ್ ಧ್ವಜ ಬಿಡುಗಡೆಯನ್ನು ಅತಿಥಿಗಳು ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ ಬಿಸ್ನಳ್ಳಿ ವರದಿ ವಾಚನ ಮಾಡಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠ ಬಿ ಮಹಾಂತೇಶ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.