ADVERTISEMENT

ಬಸ್ ನಿಲ್ದಾಣ ಫೆಬ್ರುವರಿ ಕೊನೆಗೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 10:38 IST
Last Updated 17 ಡಿಸೆಂಬರ್ 2012, 10:38 IST

ರಾಯಚೂರು: ಈ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ? ಇದು ಜಿಲ್ಲಾ ಕೇಂದ್ರವಾದ ರಾಯಚೂರು ನಗರಕ್ಕೆ ನಿತ್ಯ ಪರ ಊರುಗಳಿಂದ ಬಂದು ಹೋಗುವ ಹಾಗೂ ಇಲ್ಲಿಂದ ಬೇರೆ ಕಡೆಗೆ ತೆರಳುವ ನಗರದ ಜನತೆ ಕೇಳುವ ಪ್ರಶ್ನೆ?

ಕಾರಣ ಈ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷ ಕಳೆದಿದೆ! 2008ರಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಸಾರಿಗೆ ಸಚಿವ ಆರ್ ಅಶೋಕ ಅವರು ಈ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯಲ್ಲಿ ಅಂದರೆ 10 ತಿಂಗಳಲ್ಲಿ ಅಥವಾ ಒಂದು ವರ್ಷದಲ್ಲಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದ್ದರೆ ಅಧಿಕಾರಿಗಳಿಗೆ ಕಾಮಗಾರಿ ತ್ವರಿತ ಮತ್ತು ಸಮರ್ಪಕವಾಗಿ ನಡೆಯುವ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದರು.

ಆದರೆ, ಸಚಿವರು ಕೊಟ್ಟ ಒಂದು ವರ್ಷ ಕಾಲ ಅವಧಿಯಲ್ಲ. ಮತ್ತೆ ಮೂರು ವರ್ಷ ಸರಿದು ಹೋಗಿವೆ. ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.ಆರಂಭದಲ್ಲಿ ಕೆಲ ತಾಂತ್ರಿಕ ಮತ್ತು ಆಡಳಿತಾತ್ಮಕ ತೊಂದರೆ ಎದುರಾದರೆ ನಿರ್ಮಾಣ ಕಾಮಗಾರಿ ಆರಂಭಗೊಂಡ ಬಳಿಕ ಮೇಲ್ಛಾವಣಿ ಕುಸಿದು ಬಿದ್ದು ಕಟ್ಟಡ ಕಾರ್ಮಿಕರು ಗಾಯಗೊಂಡಿದ್ದರು. ನಂತರ ಗುತ್ತಿದೆದಾರರು ಮತ್ತು ಆಡಳಿತ ವರ್ಗ ಕಾಮಗಾರಿ ಬಗ್ಗೆ ಎಚ್ಚರಿಕೆ ವಹಿಸಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾದರು.

ಈಗ ಬಸ್ ನಿಲ್ದಾಣದ 10 ಮೀಟರ್ ಪ್ರಾಂಗಣ, ಮೇಲ್ಛಾವಣಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಬಾಗಿಲು, ಕಿಟಕಿ, ನೀರಿನ ಸೌಕರ್ಯ, ಶೌಚಾಲಯ, ಬಣ್ಣ ಹಚ್ಚುವ ಕೆಲಸ ಆಗಬೇಕಿದೆ. ಬಸ್ ನಿಲುಗಡೆಗೆ ಕಾಂಕ್ರೀಟ್ ಕೆಲಸ ನಡೆಯುತ್ತಿದೆ. ಕಾಮಗಾರಿ ದೀರ್ಘ ಕಾಲ ನಡೆಯುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆ ಮುಂದವರಿದಿದೆ.

ಅಧಿಕಾರಿಗಳ ಹೇಳಿಕೆ:  ಈಶಾನ್ಯ ಕರ್ನಾಟಕ ಭಾಗದಲ್ಲಿ ಉತ್ತಮ ಬಸ್ ನಿಲ್ದಾಣ ಇದಾಗಲಿದೆ. ಈವರೆಗೆ ಐದುವರೆ ಕೋಟಿ ಕರ್ಚು ಮಾಡಲಾಗಿದೆ. ಇನ್ನೂ ಕೆಲ ಕಾಮಗಾರಿಗೆ 70 ಲಕ್ಷ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ಚು ಫ್ಲಾಟ್‌ಫಾರ್ಮ್, ವಿಶಾಲ ಪ್ರಾಂಗಣವಿದೆ. ಮೂಲಭೂತ ಸೌಕರ್ಯ ಕಲ್ಪಿಸುವುದು, ಕಾಂಕ್ರೀಟ್ ಕೆಲಸ ಸ್ವಲ್ಪ ಬಾಕಿ ಇದೆ. ಈ ಕೆಲ ನಡೆಯುತ್ತಿದೆ. 2013 ಫೆಬ್ರುವರಿ ಕೊನೆ ವಾರದಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗೀಯ ಅಧಿಕಾರಿ ವೆಂಕಟೇಶ್ವರರೆಡ್ಡಿ ಪ್ರಜಾವಾಣಿ ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT