ADVERTISEMENT

ಬ್ಯಾನರ್: ಪ್ರಧಾನಿ ಚಿತ್ರ ಮಾಯ!

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 6:05 IST
Last Updated 16 ಸೆಪ್ಟೆಂಬರ್ 2011, 6:05 IST

ಕೊಪ್ಪಳ:ಪ್ರಧಾನಿ ಹೆಸರಷ್ಟೇ ಸಾಕು-ಚಿತ್ರ ಯಾಕೆ ಬೇಕು!
- ಬಹುಷಃ ಇದು ಜಿಲ್ಲಾ ಕಾಂಗ್ರೆಸ್ ಹಾಗೂ ಕೆಪಿಸಿಸಿ ನಾಯಕರ ಧೋರಣೆ ಇರಬಹುದೇ?
ಕಾರಣ ಇಷ್ಟೇ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಸ್ಥಾಪಿಸಿರುವ ಕೆಪಿಸಿಸಿ ಕ್ಯಾಂಪ್ ಕಚೇರಿಯಲ್ಲಿ ಹಾಗೂ ಮುಂದೆ ಅಳವಡಿಸಲಾಗಿರುವ ಬ್ಯಾನರ್‌ಗಳಲ್ಲಿ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ಚಿತ್ರವೇ ಮಾಯ!

ಅಲ್ಲದೇ, ಒಳಗಡೆ ಪತ್ರಿಕಾಗೋಷ್ಠಿ ನಡೆಯುವ ಸ್ಥಳದಲ್ಲಿ ಸಹ ದೊಡ್ಡದಾದ ಫ್ಲೆಕ್ಸ್ ಹಾಕಲಾಗಿದ್ದು, ಅದರಲ್ಲಿ ಸಹ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಸ್ಥಾನವಿಲ್ಲ.

ಸದರಿ ಬ್ಯಾನರ್‌ನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ರಾಹುಲ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಜ್ಯ ಉಸ್ತುವಾರಿ ಮಧುಸೂದನ ಮಿಸ್ತ್ರಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹನುಮಂತರಾವ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕಿ ಮೋಟಮ್ಮ ಅವರ ಭಾವಚಿತ್ರಗಳಿಗೆ ಮಾತ್ರ ಸ್ಥಾನ ಕಲ್ಪಿಸಲಾಗಿದೆ.

ಜೂ. 20ರಂದು ನಗರದಲ್ಲಿ ಜರುಗಿದ್ದ ಕೊಪ್ಪಳ ತಾಲ್ಲೂಕು ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಸಹ ವೇದಿಕೆಯಲ್ಲಿ ಬೃಹತ್ ಫ್ಲೆಕ್ಸ್ ಅಳವಡಿಸಲಾಗಿತ್ತು.

ಅದರಲ್ಲಿ ಸಹ ಎಲ್ಲಾ ರಾಜ್ಯ ನಾಯಕರ ಭಾವಚಿತ್ರಗಳು ಮೇಲಿನ ಸಾಲಿನಲ್ಲಿ ಇದ್ದರೆ, ಪ್ರಧಾನಿ ಚಿತ್ರ ಮಾತ್ರ ಕೆಳಗಡೆ ಮುದ್ರಿಸಿದ್ದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿತ್ತು. 

 ಈ ಬಾರಿ ಪ್ರಧಾನಿ ಮಂತ್ರಿಗಳ ಭಾವಚಿತ್ರವೇ ಇಲ್ಲದಿರುವುದು ಕಾರ್ಯಕರ್ತರ ಅಸಮಾಧಾನವನ್ನು ಹೆಚ್ಚಿಸಿದೆ.  `ನೋಡ್ರೀ ಸರ, ನಮ್ಮ ಲೀಡರ್ಸ್ಗೆ ಯಾರ್ ಹೇಳ್‌ಬೇಕು. ನಮ್ಮ ಪಕ್ಷದ್ ಪ್ರಧಾನ್ ಮಂತ್ರೀದ ಚಿತ್ರ ಇಲ್ಲಂದ್ರ ಹ್ಯಾಂಗ್ರಿ~ ಎಂಬುದು ಕಾರ್ಯಕರ್ತರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.