ದೇವದುರ್ಗ: ಈ ವರ್ಷದ ಆರಂಭದಿಂದಲೂ ಕಾಣದಂಥ ಮಳೆ ಶನಿವಾರ ಸಂಜೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆ ಧಾರಾಕಾರವಾಗಿ ಸುರಿದಿರುವುದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿರುವುದು ವರದಿಯಾಗಿದೆ.
ತಾಲ್ಲೂಕಿನ ಗಬ್ಬೂರು ಹೋಬಳಿಯ ಕೆಲವು ಗ್ರಾಮಗಳ ಮಳೆಯಿಂದಾಗಿ ರಸ್ತೆಗಳು ಜಲಾವೃತ್ತಗೊಂಡ ಕಾರಣ ಸಂಚಾರ ಸ್ಥಗಿತಗೊಂಡಿರುವುದು ಮತ್ತು ಶನಿವಾರ ಪಟ್ಟಣದಲ್ಲಿ ವಾರದ ದೊಡ್ಡ ಸಂತೆ. ಇನ್ನೇನು ಸಂತೆ ಮುಗಿಸಿಕೊಂಡು ತಮ ಊರಿಗೆ ಹೊರಡಬೇಕೆನ್ನುವಷ್ಟರಲ್ಲಿಯೇ ಆರಂಭವಾದ ಮಳೆ ಕಲವೇ ಕ್ಷಣಗಳಲ್ಲಿ ಎಲ್ಲಿ ನೋಡಿದರೂ ನೀರೇ, ನೀರು. ತೆಗ್ಗು,ದಿನ್ನಿ ಗೊತ್ತಿಲ್ಲದ ಹೊಸಬರು ರಸ್ತೆಯ ಅಕ್ಕ, ಪಕ್ಕದಲ್ಲಿನ ಮೊರೆಗಳಿಗೆ ಎದ್ದು-ಬಿದ್ದು ಹೋಗುವುದು ಸಾಮಾನ್ಯವಾಗಿತ್ತು.
ಈಗಾಗಲೇ ಕಳೆದೆರಡು ದಿನಗಳಿಂದ ತಾಲ್ಲೂಕಿನಲ್ಲಿ ಮಳೆ ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆಗಳು ಭರದಿಂದ ನಡೆದಿದ್ದು, ಬಿತ್ತನೆ ಮಾಡಿದ ಜಮೀನುಗಳಿಗೆ ಶನಿವಾರ ಸಂಜೆ ಸುರಿದ ಮಳೆಯಿಂದ ರೈತರ ಸಂತೋಷಕ್ಕೆ ಕಾರಣವಾಗಿದೆ.
ಪಟ್ಟಣದ ಮುಖ್ಯ ರಸ್ತೆಯನ್ನು ವಿಸ್ತರಣಗೊಳಿಸಿ ಎರಡು ವರ್ಷ ಸಮೀಪಿಸುತ್ತಿದ್ದರೂ ಅಭಿವೃದ್ಧಿ ಇಲ್ಲ. ಚರಂಡಿ ಇಲ್ಲದ ಕಾರಣ ಇಡೀ ಪಟ್ಟಣದ ಚರಂಡಿ ನೀರು ಮಳೆಯ ನೀರಿನ ಜೊತೆಗೆ ಶೇಖರಣೆಗೊಂಡು ಪಟ್ಟಣದ ತುಂಬೇಲ್ಲ ನಿಂತುಕೊಂಡಿರುವುದರಿಂದ ಅದೇ ಗುಬ್ಬೇದ್ದು ನಾರುವ ವಾಸನೆಯಲ್ಲಿ ಪಟ್ಟಣ ನಾಗರಿಕರು ಹೋಡಾಡಬೇಕಾದ ಅನಿವಾರ್ಯತೆ ಇದೆ.
ಸುಮಾರು ನೂರಾರು ವರ್ಷಗಳಿಂದ ನಡೆದು ಬಂದಿರುವ ಪಟ್ಟಣದ ಸಂತೆಗೆ ಸರ್ಕಾರಿ ಕಚೇರಿಗಳ ನಿರ್ಮಾಣದಿಂದಾಗಿ ಕಳೆದ ಎರಡು ವರ್ಷದಿಂದ ಸ್ಥಳದ ಅಭಾವದ ಕಾರಣ ವಾರದ ಸಂತೆಗೆ ಇನ್ನಿಲ್ಲದ ತೊಂದರೆ ಎದುರಾಗಿದೆ.
ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಂತೆ ಸಮಸ್ಯೆ ಬಗ್ಗೆ ಪಟ್ಟಣದ ನಾಗರಿಕರು, ಸಂಘಟನೆಗಳ ಮುಖಂಡರು ಮತ್ತು ಜನಪ್ರತಿನಿಧಿಗಳು ಗಮನ ಸೆಳೆದರೂ ಕ್ರಮಕ್ಕೆ ಮುಂದಾಗದೆ ಇರುವುದರಿಂದ ಪ್ರತಿವಾರ ಚರಂಡಿ ಅಕ್ಕ-ಪಕ್ಕದಲ್ಲಿಯೇ ಕುಳಿತು ವ್ಯಾಪಾರಸ್ಥರು ವ್ಯವಹಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರೆ ಸಾಕು ಇಡೀ ತರಕಾರಿಗೆ ಚರಂಡಿ ನೀರು ನುಗ್ಗಿ ವ್ಯಾಪಾರಸ್ಥರಿಗೆ ತೊಂದರೆಯಾಗುವುದು ಮಾತ್ರ ನಿರಂತರವಾಗಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.