ಲಿಂಗಸುಗೂರ: ಜೈನ ಧರ್ಮದ 24ನೇ ತೀರ್ಥಂಕರರಾಗಿ ಅಂಹಿಸೆಯ ತತ್ವ ಸಿದ್ಧಾಂತಗಳನ್ನು ನಾಡಿಗೆ ನೀಡುವ ಜೊತೆಗೆ ಅವುಗಳನ್ನು ಪಾಲಿಸಿಕೊಂಡು ಬಂದವರಲ್ಲಿ ಮಹಾವೀರ ತೀರ್ಥಂಕರರು ಪ್ರಮುಖರು. ಅವರ ಜಯಂತ್ಯುತ್ಸವ ಅಂಗವಾಗಿ ಗುರುವಾರ ಪಟ್ಟಣದಲ್ಲಿ ರಾಜಸ್ಥಾನಿ ಮಾರವಾಡಿ ಸಂಘದವರು ಮಹಾವೀರರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಸಿದರು.
ಗುರುವಾರ ಅಲಂಕೃತಗೊಳಿಸಿದ ತೆರೆದ ವಾಹನದಲ್ಲಿ ಮಹಾವೀರರ ಭಾವಚಿತ್ರ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ್ಟಣದ ಗಡಿಯಾರ ವೃತ್ತದಿಂದ ಮೇನ ಬಜಾರ, ಹನುಮಾನ ವೃತ್ತ, ನಗರೇಶ್ವರ ದೇವಸ್ಥಾನ, ಗುರುಗುಂಟಾ ರಸ್ತೆ ಮೂಲಕ ಮಂತ್ರ ಪಠಣ, ಜಯಘೋಷಗಳೊಂದಿಗೆ ನಡೆದ ಮೆರವಣಿಗೆ ಕೊನೆಯಲ್ಲಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು.
ಬಹಿರಂಗ ಸಭೆಯಲ್ಲಿ ಸಮಾಜದ ಹಿರಿಯ ಗಣ್ಯರು ಮಹಾವೀರರ ತತ್ವಾದರ್ಶಗಳ ಮೆಲಕು ಹಾಕಿದರು. ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಂತರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಮತ್ತು ಕಾರಾಗೃಹದಲ್ಲಿನ ವಿಚಾರಣಾಧೀನ ಖೈದಿಗಳಿಗೆ ಸೇಬು ಹಣ್ಣು, ಹಾಲು, ಬ್ರೆಡ್ ವಿತರಿಸಲಾಯಿತು.
ಗಣೇಶಚಂದದಾದಾ, ರಾಜೇಂದ್ರಕುಮಾರ, ರೇಖಚಂದ ಮೆಹತಾ, ವಿಜಯಕುಮಾರ, ಮಹೇಂದ್ರಕುಮಾರ, ಗೌತಮಚಂದ, ವಿಕೇಶಕುಮಾರ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.