ADVERTISEMENT

ಮುದಗಲ್‌ನ ನವೋದಯ ವಿದ್ಯಾಲಯ:ಪ್ರಾಚಾರ್ಯರ ವರ್ಗಾವಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 9:55 IST
Last Updated 6 ಜುಲೈ 2012, 9:55 IST

ರಾಯಚೂರು: ಮುದಗಲ್ ಹತ್ತಿರ ಕನ್ನಾಪುರಹಟ್ಟಿಯಲ್ಲಿರುವ ನವೋದಯ ವಿದ್ಯಾಲಯದ ಪ್ರಾಚಾರ್ಯರು ಮತ್ತು ಉಪ ಪ್ರಾಚಾರ್ಯರನ್ನು ವರ್ಗಾವಣೆ ಮಾಡಬೇಕು, ಅರ್ಹ ಉತ್ತಮ ಆಡಳಿತ ನಡೆಸಬಲ್ಲವರನ್ನು ನೇಮಿಸಬೇಕು, ಸರ್ಕಾರದಿಂದ ದೊರಕಿದ ಅನುದಾನದಲ್ಲಿ ಸಮರ್ಪಕ ರೀತಿ ಸೌಲಭ್ಯ ದೊರಕಿಸಬೇಕು, ಶಾಲೆಯನ್ನು ಅತ್ಯುತ್ತಮ ಮಾದರಿ ಶಾಲೆಯನ್ನಾಗಿ ರೂಪಿಸಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕನ್ನಾಪುರಹಟ್ಟಿ ನವೋದಯ ವಿದ್ಯಾಲಯ ವಿದ್ಯಾರ್ಥಿಗಳ ಪಾಲಕರ ಸಂಘದ ಪ್ರತಿನಿಧಿಗಳು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಜಿಲ್ಲಾಧಿಕಾರಿಗಳೇ ನವೋದಯ ವಿದ್ಯಾಲಯ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಅವರಿಗೆ ಈ ಮೂಲಕ ಮನವಿ ಮಾಡಲಾಗಿದೆ. ಅಲ್ಲದೇ ನೊಯ್ಡಾದಲ್ಲಿರುವ ನವೋದಯ ವಿದ್ಯಾಲಯ ಸಮಿತಿಯ ಸಾರ್ವಜನಿಕ ಅಹವಾಲು ಸ್ವೀಕಾರ ವಿಭಾಗದ ಆಯುಕ್ತರಿಗೂ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಕಳೆದ ಮಾರ್ಚ್ ತಿಂಗಳಲ್ಲಿಯೇ ಪ್ರಾಚಾರ್ಯರು ಮತ್ತು ಉಪ ಪ್ರಾಚಾರ್ಯರ ವರ್ಗಾವಣೆಗೆ ಮನವಿ ಮಾಡಲಾಗಿದ್ದರೂ ಸ್ಪಂದಿಸಿಲ್ಲ. ಈಗ ಅವರನ್ನು ವರ್ಗಾವಣೆ ಮಾಡಬೇಕು. ವಿದ್ಯಾಲಯದಲ್ಲಿ ಖಾಲಿ ಇರುವ  ಗಣಿತ, ಜೀವಶಾಸ್ತ್ರ ವಿಷಯ ಪ್ರಾಧ್ಯಾಪಕರ ನೇಮಕ ಮಾಡಬೇಕು, ಈ ಶಾಲೆಯಲ್ಲಿದ ವ್ಯಾಸಂಗ ಮಾಡುತ್ತಿರುವ ಬಹುತೇಕ ಮಕ್ಕಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮಕ್ಕಳಾಗಿದ್ದಾರೆ.

ಹಿಂದುಳಿದ ಪ್ರದೇಶದ ಈ ಭಾಗದ ಇಂಥ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ಪ್ರಯತ್ನವನ್ನು ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಕ್ರಮ ಕೈಗೊಳ್ಳದೇ ಇದ್ದಲ್ಲಿ ಕನ್ನಾಪುರಹಟ್ಟಿಯಲ್ಲಿನ ನವೋದಯ ವಿದ್ಯಾಲಯ ಎದುರು ಪಾಲಕರ ಸಂಘದ ವತಿಯಿಂದ ಧರಣಿ ಮಾಡಲಾಗುವುದು. ಬಳಿಕ ಜಿಲ್ಲಾಡಳಿತ ಕಚೇರಿ, ಹೈದರಾಬಾದ್‌ನಲ್ಲಿರುವ ಪ್ರಾದೇಶಿಕ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಂಘದ ಕಾರ್ಯದರ್ಶಿ ನರಸಪ್ಪ ಹುಲಿಬೆಂಚಿ, ಉಪಾಧ್ಯಕ್ಷ ಶಂಕರಪ್ಪ ಯಕ್ಲಾಸಪುರ, ಕಾರ್ಯಕಾರಿ ಅಧ್ಯಕ್ಷ ಲಿಂಗಪ್ಪ ಕಸಬಾ ಲಿಂಗಸುಗೂರು, ಜಂಟಿ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನಗೌಡ ಪಾಟೀಲ ಕಾತರಕಿ, ಯಂಕಪ್ಪ, ಯಲ್ಲಪ್ಪ ಜೋಗಿಹಳ್ಳಿ ಅವರು ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.