ADVERTISEMENT

ಯಾತ್ರಾರ್ಥಿಗಳ ವಿಶೇಷ ತೆರಿಗೆ ರದ್ದತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 5:58 IST
Last Updated 4 ಮಾರ್ಚ್ 2014, 5:58 IST

ರಾಯಚೂರು: ಹಿಂದೂಗಳ ಧಾರ್ಮಿಕ ಯಾತ್ರೆಗೆ ಸರ್ಕಾರವು ಹಾಕುವ ವಿಶೇಷ ತೆರಿಗೆಯನ್ನು (ಜಿಝಿಯಾ) ರದ್ದುಪ­ಡಿಸ­ಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ  ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಕುಂಭ­ಮೇಳ, ಅಮರನಾಥ ಯಾತ್ರೆ, ಚಾರ­ಧಾಮ ಯಾತ್ರೆ ಮುಂತಾದ ಕ್ಷೇತ್ರಕ್ಕೆ ಹೋಗುವ ಹಿಂದೂ ಯಾತ್ರಾರ್ಥಿಗಳಿಗೆ ಸರ್ಕಾರವು ಕಲ್ಪಿಸುವ ವಿಶೇಷ ಬಸ್‌ಗಳ ಬಾಡಿಗೆಯನ್ನು ನಿತ್ಯದ ಬಾಡಿಗೆಗಿಂತ ಹೆಚ್ಚುವರಿಯಾಗಿ ಪಡೆಯಲಾಗುತ್ತಿದೆ. ಅಲ್ಲದೇ ಯಾತ್ರಿಕರಿಂದ ವಿಶೇಷ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಕಳೆದ ವರ್ಷ ಕುಂಭಮೇಳ ಸಂದರ್ಭದಲ್ಲಿ ರೈಲ್ವೆ ಇಲಾಖೆಯು ಭಕ್ತರ ಮೇಲೆ ಪ್ರವಾಸಿ ಬಾಡಿಗೆ ಹೇರಿತ್ತು. ಕಳೆದ ಮೂರು ವರ್ಷಗಳಿಂದ ಚಾರಧಾಮ ಯಾತ್ರೆ ಪ್ರವಾಸಿ ಶುಲ್ಕದಲ್ಲಿ ಶೇ 15ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಆರೋಪಸಿದರು.

ದಕ್ಷಿಣದ ಕಾಶಿ ಎಂದು ಪ್ರಸಿದ್ಧಿಯಾ­ಗಿರುವ ಆಂಧ್ರಪ್ರದೇಶದ ಕರಿಂ ನಗರದಲ್ಲಿ ವೆಮುಲವಾಡಾ ರಾಜ­ರಾಜೇಶ್ವರಸ್ವಾಮಿ ಶಿವ ಮಂದಿರದಲ್ಲಿ ಮಹಾಶಿವರಾತ್ರಿ ಸಮಯದಲ್ಲಿ ಅಲ್ಲಿನ ಸರ್ಕಾರ ದುಪ್ಪಟ್ಟು ಬಸ್‌ ಬಾಡಿಗೆ ವಿಧಿಸಿದೆ ಎಂದು ಆಪಾದಿಸಿದರು.

ಒಂದೆಡೆ ಹಜ್ ಯಾತ್ರೆಗೆ ಕೋಟಿಗಟ್ಟಲೆ ಅನುದಾನ, ಸೌಲಭ್ಯ­ಗಳನ್ನು ಸರ್ಕಾರ ನೀಡುತ್ತಿದೆ. ಇನ್ನೊಂದೆಡೆ ಹಿಂದೂಗಳಿಂದ ದುಪ್ಪಟ್ಟು ಬಾಡಿಗೆ ಪಡೆಯಲಾಗುತ್ತಿದೆ. ಇಂಥ ಕ್ರಮಗಳನ್ನು ಸರ್ಕಾರ ಕೈ ಬಿಡಬೇಕು. ಬಸ್ ಬಾಡಿಗೆ ತಕ್ಷಣವೇ ರದ್ದುಪಡಿಸಬೇಕು. ದೇವರ ದರ್ಶನಕ್ಕೆ ಬರುವ ಹಿಂದೂಗಳಿಗೆ ಬಸ್‌ ಬಾಡಿಗೆಯಲ್ಲಿ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿದರು.

ಹಿಂದೂಗಳ ಮಂದಿರವನ್ನು ಸರ್ಕಾ­ರೀಕರಣಗೊಳಿಸುವ ಪ್ರಯತ್ನ ಬಿಡ­ಬೇಕು. ಎರಡು ತಿಂಗಳಲ್ಲಿ ಬೆಂಗ­ಳೂ­ರಿನಲ್ಲಿ ಶಕ್ತಿ ಗಣಪತಿ ದೇವಸ್ಥಾನ ಮತ್ತು ಸರ್ಕಲ್ ಮಾರೆಮ್ಮ ದೇವಸ್ಥಾನಗಳನ್ನು ಸರ್ಕಾರೀಕ­ರಣಗೊಳಿಸಿರುವುದು ಖಂಡನೀಯ. ಹಿಂದೂಗಳ ಧಾರ್ಮಿಕ ವಿಷಯದಲ್ಲಿನ ಇಂಥ ಹಸ್ತಕ್ಷೇಪ ನಿಲ್ಲಿಸಬೇಕು. ಸರ್ಕಾರವು ತಕ್ಷಣವೇ ಸಂಬಂಧಪಟ್ಟ ದೇವಸ್ಥಾನಗಳನ್ನು ಭಕ್ತರ ವಶಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.

ಹಿಂದೂ ಜನಜಾಗೃತಿ ಸಮಿತಿ  ಕೃಷ್ಣವೇಣಿ, ಜ್ಯೋತಿ, ಸುವರ್ಣ, ವಿಜಯಲಕ್ಷ್ಮೀ, ಸರಳಾ, ಸುನಂದ, ಜಯಾ ಪಾಟೀಲ, ಶೋಭಾ ಕಟವಟೆ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.