ADVERTISEMENT

‘ರಷ್ಯಾ ಮಹಾಕ್ರಾಂತಿ ಸ್ಫೂರ್ತಿಯಾಗಲಿ’

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 9:01 IST
Last Updated 27 ಅಕ್ಟೋಬರ್ 2017, 9:01 IST

ರಾಯಚೂರು: ಒಂದು ಶತಮಾನದ ಹಿಂದೆ ರಷ್ಯಾದಲ್ಲಿ ನಡೆದ ಕ್ರಾಂತಿಯು ಮಾನವನಿಂದ ಮಾನವನ ಶೋಷಣೆಯನ್ನು ಮೊದಲ ಬಾರಿಗೆ ಕೊನೆಗಾಣಿಸಿತು. ಈ ಮಹಾಕ್ರಾಂತಿಯು ಸ್ಫೂರ್ತಿದಾಯಕವಾಗಲಿ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ –ಎಸ್‌ಯುಸಿಐ (ಸಿ) ಜಿಲ್ಲಾ ಸಮಿತಿ ಸದಸ್ಯ ಚನ್ನಬಸವ ಜಾನೇಕಲ್ ಹೇಳಿದರು.

ತಾಲ್ಲೂಕಿನ ಇಡಪನೂರು ಗ್ರಾಮದಲ್ಲಿ ರಷ್ಯಾದ ನವೆಂಬರ್ ಕ್ರಾಂತಿಯ ಶತಮಾನೋತ್ಸವದ ನಿಮಿತ್ತ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ –ಎಸ್‌ಯುಸಿಐ (ಸಿ) ನಿಂದ ಗುರುವಾರ ಏರ್ಪಡಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾಕ್ರಾಂತಿಯ ಬಳಿಕ ಎಲ್ಲರಿಗೂ ಉಚಿತ ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ, ಮಹಿಳಾ ಸ್ವಾತಂತ್ರ್ಯ-ಸಮಾನತೆ ಖಾತ್ರಿಪಡಿಸಲಾಗಿತ್ತು. ರೈತರು, ಕಾರ್ಮಿಕರಿಗೆ ಭದ್ರತೆ ಖಾತ್ರಿಪಡಿಸಿದ ರಷ್ಯಾ ಮಹಾಕ್ರಾಂತಿಯು ನಮ್ಮಂತಹ ಬಂಡವಾಳ ದೇಶಗಳ ದುಡಿಯುವ ಜನತೆಗೆ ಇದು ಅತ್ಯಂತ ಸ್ಫೂರ್ತಿಯನ್ನು ನೀಡಿದೆ ಎಂದರು.

ADVERTISEMENT

ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಅಪರ್ಣಾ.ಬಿ.ಆರ್. ಮಾತನಾಡಿ, ಈ ಕ್ರಾಂತಿಯು ಮನುಕುಲದ ಇತಿಹಾಸದಲ್ಲಿ ಹಲವು ಪಾಠಗಳನ್ನು ಹೇಳಿಕೊಟ್ಟಿದೆ. ನಮ್ಮ ದೇಶದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಬೇಕಾದರೆ ಇದರಿಂದ ಸ್ಪೂರ್ತಿಯನ್ನು ಮತ್ತು ಪಾಠವನ್ನು ಕಲಿಯಬೇಕಾಗಿದೆ ಎಂದರು

ಸಮಾಜದ ಎಲ್ಲ ಪ್ರಜ್ಞಾವಂತ ಜನರು ನವೆಂಬರ್ ಕ್ರಾಂತಿಯ ಮಹತ್ವವನ್ನು ಸಂದೇಶವನ್ನು ತಿಳಿಯಬೇಕು. ಅದೇ ರೀತಿ ನಮ್ಮ ದೇಶದಲ್ಲೂ ಸಹ ಶೋಷಣಾರಹಿತ, ಭ್ರಷ್ಟಾಚಾರ ರಹಿತ, ಜಾತಿ-ಕೋಮು ಗಲಭೆಗಳಿಲ್ಲದ ಸುಂದರ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.

ರಾಯಚೂರು, ಯರಗೇರಾ, ಇಡಪನೂರು, ತಲಮಾರಿ, ಗಿಲ್ಲೆಸಗೂರು, ಕೈಗಾರಿಕಾ ಪ್ರದೇಶವಾದ ವಡ್ಲೂರು ಕ್ರಾಸ್, ಶಕ್ತಿನಗರ ಮತ್ತು ದೇವಸಗೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಈ ಜಾಗೃತಿ ಜಾಥಾ ಸಂಚರಿಸಿತು. ವಿವಿಧೆಡೆ ಸಭೆಗಳ ಮೂಲಕ ಜನರಿಗೆ ರಷ್ಯಾದ ಕ್ರಾಂತಿ ಸಾಧನೆಗಳ ಬಗ್ಗೆ ವಿವರಿಸಲಾಯಿತು. ಜಾಥಾದಲ್ಲಿ ರಾಮಣ್ಣ ಎಂ, ವೈ.ಪಿ. ಸಾಗರ್, ಎಎಸ್‌ಶಿರಸ್ಯಾಡ್, ಸುಹಾಸ್, ಸಲೀಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.