ADVERTISEMENT

ರಾಜಭವನ ತಲುಪಿದ ಅಕ್ರಮ ಗಣಿ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 4:30 IST
Last Updated 18 ಜೂನ್ 2012, 4:30 IST

ಲಿಂಗಸುಗೂರ: ರಾಯಚೂರು ಜಿಲ್ಲೆಯ ದೇವದುರ್ಗ ಮತ್ತು ಲಿಂಗಸುಗೂರ ತಾಲ್ಲೂಕುಗಳು ಅಕ್ರಮ ಗಣಿಗಾರಿಕೆ ತಾಣವಾಗಿವೆ. ಅದರಲ್ಲೂ ಲಿಂಗಸುಗೂರ ತಾಲ್ಲೂಕಿನಲ್ಲಿ ಕಂದಾಯ, ಪೊಲೀಸ್, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಕುಮ್ಮಕ್ಕಿನಿಂದ ಅಕ್ರಮ ಗಣಿ ಮಾಲೀಕರ ಅಟ್ಟಹಾಸಕ್ಕೆ ಐತಿಹಾಸಿಕ ಕುರುಹುಗಳು ನೆಲಕಚ್ಚುತ್ತಿವೆ. 

 ಕೆಲ ಗ್ರಾಮಗಳ ಜನತೆ ಬದುಕು ಸಂಕಷ್ಟಕ್ಕೆ ಸಿಲುಕಿರುವ ಕುರಿತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ, ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ರಾಜ್ಯಪಾಲರು ಮತ್ತು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಎಂದಾಕ್ಷಣ ಬಳ್ಳಾರಿ, ಬಾಗಲಕೋಟೆ, ಬೆಂಗಳೂರು ಜಿಲ್ಲೆಗಳ ಹೆಸರು ಮಾತ್ರ ಕೇಳಿಬರುತ್ತಿವೆ. ಜಿಲ್ಲೆಯ ದೇವದುರ್ಗ ಪಟ್ಟಣದ ಸುತ್ತಮುತ್ತ, ಗಬ್ಬೂರುಗಳ ಸರ್ಕಾರಿ ಮತ್ತು ಪಟ್ಟಾ ಭೂಮಿಗಳಲ್ಲಿ ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಲಿಂಗಸುಗೂರ ತಾಲ್ಲೂಕಿನ ಮುದಗಲ್ಲ, ಮಾಕಾಪುರ, ಬಯ್ಯಾಪೂರ, ಬೊಮ್ಮನಾಳ, ಆದಾಪುರ, ನಾಗರಹಾಳ, ವ್ಯಾಸನಂದಿಹಾಳ, ತಲೆಕಟ್ಟು, ತೊರಲಬೆಂಚಿ, ತೊಂಡಿಹಾಳ, ಸಜ್ಜಲಗುಡ್ಡ, ಕಿಲ್ಲಾರಹಟ್ಟಿ, ಆಮದಿಹಾಳ ಮತ್ತಿತರ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿವೆ ಎಂದು ದಾಖಲೆಗಳ ಸಮೇತ ದೂರು ನೀಡಿದ್ದಾರೆ.

ಮುದಗಲ್ಲ ಮತ್ತು ಲಿಂಗಸುಗೂರ ಕಂದಾಯ ಹೋಬಳಿಯ ಸರ್ಕಾರಿ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಜಮೀನುಗಳನ್ನು ಮನಸೋ ಇಚ್ಛೆ ಮಂಜೂರ ಮಾಡಲಾಗಿದೆ. ಕೃಷಿಗೆ ಯೋಗ್ಯವಲ್ಲದ ಜಮೀನುಗಳಲ್ಲಿ ಬೇರೊಂದು ಜಮೀನಿನ ಸರ್ವೆ ನಂಬರ ನೀಡಿ ಆದೇಶ ಮಾಡಿರುವ ನಿದರ್ಶನಗಳಿವೆ. ಇನ್ನ್ಯಾವುದೊ ಜಮೀನಿನಲ್ಲಿ ಮಂಜೂರಾದ ಸರ್ವೆ ನಂಬರಗಳನ್ನು ಕೃಷಿಗೆ ಯೋಗ್ಯವಲ್ಲದ ಸರ್ಕಾರಿ ಜಮೀನಿನಲ್ಲಿ ನಕ್ಷೆ ಸಿದ್ಧಪಡಿಸಿ ಕೃತಕ ಸರ್ವೆ ನಂಬರಗಳನ್ನು ನೀಡಿರುವ ಬಗ್ಗೆ ಟೋಂಚ ಮತ್ತು ಟಿಪ್ಪಣಿ ನಕ್ಷೆಗಳ ಸಮೇತ ದೂರಿನಲ್ಲಿ ವಿವರಿಸಿದ್ದಾರೆ.

ಸ್ವತಃ ಸಹಾಯಕ ಆಯುಕ್ತರೆ ಲಿಂಗಸುಗೂರ ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಕೆಲವರು 1-2 ಎಕರೆ ಜಮೀನಿನಲ್ಲಿ ಗಣಿಗಾರಿಕೆ ಪರವಾನಿಗೆ ಪಡೆದು, 8-10 ಎಕರೆ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಸರ್ಕಾರಿ ಜಮೀನಿನ ಪಕ್ಕದ ಜಮೀನು ಸರ್ವೆ ನಂಬರ ಮೇಲೆ ಪರವಾನಿಗೆ ಪಡೆದು ಸರ್ಕಾರಿ ಮತ್ತು ಅರಣ್ಯ ಇಲಾಖೆಗಳ ಜಮೀನಿನಲ್ಲಿ ಗಣಿಗಾರಿಕೆ ನಡೆಸುತ್ತಿರುವುದನ್ನು ಕೂಡ ಸ್ವತಃ ತಹಸೀಲ್ದಾರ ಜಪ್ತಿ ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ವರದಿ ಸಲ್ಲಿಸಿರುವುದನ್ನು ಉಲ್ಲೇಖಿಸಿದ್ದಾರೆ.

ಮುದಗಲ್ಲಿನ ಐತಿಹಾಸಿಕ ಕೋಟೆ ನಶಿಸುತ್ತ ಸಾಗಿದೆ. ಮಾಕಾಪುರ, ತೊಂಡಿಹಾಳ, ಬೊಮ್ಮನಾಳ, ನಾಗರಹಾಳ, ವ್ಯಾಸನಂದಿಹಾಳ ಮತ್ತಿತರ ಗ್ರಾಮಗಳಿಗೆ ಹೊಂದಿಕೊಂಡೆ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಸ್ಪೋಟಕ ಮಾಡುತ್ತಿರುವುದರಿಂದ ಜನವಸತಿ ಮನೆಗಳು, ದೇವಸ್ಥಾನಗಳು, ಸರ್ಕಾರಿ ಕಟ್ಟಡಗಳು ಜಖಂಗೊಂಡಿದ್ದು ಕೂಲಂಕುಷವಾಗಿ ವಿಶೇಷ ತಂಡ ರಚಿಸಿ ತನಿಖೆ ನಡೆಸುವಂತೆ ಲೋಕಾಯುಕ್ತರು ಮತ್ತು ರಾಜ್ಯಪಾಲರಿಗೆ ಸಲ್ಲಿಸಿದ ಪ್ರತ್ಯೇಕ ದೂರುಗಳಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.