ADVERTISEMENT

ಲಾಠಿಚಾರ್ಚ್‌: ಜಿಲ್ಲಾಧಿಕಾರಿ ಧೋರಣೆಗೆ ವಿವಿಧೆಡೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 8:34 IST
Last Updated 4 ಡಿಸೆಂಬರ್ 2013, 8:34 IST

ರಾಯಚೂರು: ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶಾಂತಿಯುತ ಹೋರಾಟ ನಡೆಸುತ್ತಿದ್ದ ಕರ್ನಾಟಕ ರೈತ ಸಂಘದ ಕಾರ್ಯಕರ್ತರ ಮೇಲೆ ಏಕಾಏಕಿ ಪೊಲೀಸ್‌ ಲಾಠಿಚಾರ್ಜ್ ಮಾಡಿಸಿರುವ ಕ್ರಮ ಖಂಡಿಸಿ ಜಿಲ್ಲೆಯ ವಿವಿಧ ತಾಲ್ಲೂಕಗಳಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಲಿಂಗಸುಗೂರು ವರದಿ
ಲಿಂಗಸುಗೂರು ಲಕ್ಷ್ಮಿ ದೇವಸ್ಥಾನ­ದಿಂದ ಬಸ್‌ ನಿಲ್ದಾಣ ವೃತ್ತದ ವರೆಗೆ ಜಿಲ್ಲಾಧಿಕಾರಿ ವಿರುದ್ಧ ಧಿಕ್ಕಾರ ಕೂಗುತ್ತ ಆಗಮಿಸಿದರು. ಜಿಲ್ಲಾಧಿಕಾರಿ ಅಮಾ­ನತು ಮಾಡುವಂತೆ ಆಗ್ರಹಿಸಿ, ಮುಖ್ಯಮಂತ್ರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ ಜಿ.ಎಸ್‌. ಮಹಾಜನ ಮೂಲಕ ಸಲ್ಲಿಸಿದರು. 

ಪ್ರತಿಭಟನೆ ನೇತೃತ್ವವನ್ನು ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕ ಉಪಾಧ್ಯಕ್ಷ ಜಿ. ಶೇಖರಯ್ಯ. ತಾಲ್ಲೂಕು ಘಟಕ ಅಧ್ಯಕ್ಷ ಬಸವರಾಜ ನಗನೂರು, ಕಾರ್ಯ­ದರ್ಶಿ ರೇವಣಸಿದ್ಧಪ್ಪ. ಮುಖಂಡ­ರಾದ ತಿಪ್ಪರಾಜ, ಬಾಬು ಭೂಪುರ, ಹನುಮಂತಪ್ಪ ಪೂಜಾರಿ, ಯಲ್ಲಪ್ಪ, ಶಿವಪುತ್ರ ಕುಪ್ಪಿಗುಡ್ಡ, ಅವಮ್ಮ, ಈರಮ್ಮ ಮತ್ತಿತರರು ಭಾಗವಹಿಸಿದ್ದರು.

ಡಿವೈಎಸ್‌ಪಿ ಅನಿತಾ ಹದ್ದಣ್ಣವರ ನೇತೃತ್ವದಲ್ಲಿ ಪೊಲೀಸ್‌ ಬಿಗಿ ಬಂದೋ­ಬಸ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಿಪಿಐ ಎಂ. ವರದರಾಜು, ಪಿಎಸ್‌ಗಳಾದ ಖಾಜಾಹುಸೇನ್‌, ಉಮೇಶ ಇದ್ದರು.

ದೇವದುರ್ಗ ವರದಿ
ವಿವಿಧ ಬೇಡಿಕೆಗಳನ್ನು ಮುಂದೆ ಇಟ್ಟುಕೊಂಡು ಸೋಮವಾರ ಜಿಲ್ಲಾಧಿ­ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಏಕಾಏಕಿ­ಯಾಗಿ ಕರ್ನಾಟಕ ರೈತ ಸಂಘದ ಮುಖಂಡರ ಮತ್ತು ರೈತರ ವಿರುದ್ಧ ಲಾಠಿಚಾರ್ಚ್‌ಗೆ ಕಾರಣರಾಗಿರುವ ಜಿಲ್ಲಾಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಸಂಘದ ತಾಲ್ಲೂಕು ಸಮಿತಿ ಮುಖಂಡರು ಜಿಲ್ಲಾಧಿಕಾರಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಹಾಗೂ ಇತರರು ಪಟ್ಟಣದ ಹಜರತ್‌ ಜೈಹಿರುದ್ದೀನ್‌ ಪಾಶಾ ವೃತ್ತದಲ್ಲಿ ಜಿಲ್ಲಾಧಿಕಾರಿ ವಿರುದ್ಧ ಧಿಕ್ಕಾರ ಕೂಗಿದರು.

ಭೂಮಿ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು, ಸರ್ಕಾರಿ ಭೂಮಿಯಲ್ಲಿ ವಾಸವಾಗಿರುವ ವಸತಿಹೀನರಿಗೆ ಹಕ್ಕು­ಪತ್ರ ನೀಡಬೇಕು, ಜಿಲ್ಲೆಯ ಎಲ್ಲ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮ ಜರುಗಿ­ಸಬೇಕು ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಂಘದ ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟ­ನೆಯನ್ನು ಜಿಲ್ಲಾಧಿಕಾರಿ ಲಾಠಿಚಾರ್ಚ್‌ ನಡೆಸಲು ಆದೇಶ ನೀಡಿದರುವುದು ಖಂಡನೀಯ. ಈ ಕೂಡಲೇ ಸರ್ಕಾರ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಆಗ್ರಹಿಸಿದರು.

ಹಟ್ಟಿ ಚಿನ್ನದ ಗಣಿ
ಜಿಲ್ಲೆಯ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ರಾಯಚೂರು ಜಿಲ್ಲಾಧಿ­ಕಾರಿ ಕಚೇರಿ ಮುಂದೆ ಕರ್ನಾಟಕ ರೈತರ ಸಂಘದ ಕಾರ್ಯಕರ್ತರ ಮೇಲೆ ನಡೆಸಿ­ರುವ ಹಲ್ಲೆಯನ್ನು ಟ್ರೇಡ್ ಯೂನಿ­ಯನ್ ಸೆಂಟರ್ ಆಫ್ ಇಂಡಿಯಾ­­­(ಟಿಯುಸಿಐ) ಖಂಡಿಸಿದೆ.
ಸರ್ಕಾರಿ ಭೂಮಿ ಸಾಗುವಳಿದಾ­ರರಿಗೆ ಪಟ್ಟಾ ನೀಡಬೇಕು. ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಜಿಲ್ಲಾಧಿಕಾರಿ ಮಾಡಿ­ರುವ ಆರೋಪ ಸಾಬೀತು ಪಡಿಸಬೇಕು ಎಂದು ಸಂಘಟನೆಯ ಉಪಾಧ್ಯಕ್ಷ ಬಾಬು ಬೂಪುರ್ ಹಾಗೂ ಕಾರ್ಯ­ದರ್ಶಿ ಶಿವಕುಮಾರ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.