ADVERTISEMENT

ವೈದ್ಯಕೀಯ ಪ್ರಮಾಣಪತ್ರ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 5:40 IST
Last Updated 5 ಅಕ್ಟೋಬರ್ 2012, 5:40 IST

ರಾಯಚೂರು: ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ಕೊಡುವ ಮುನ್ನ ಅನುಸರಿಸಬೇಕಾದ ನಿಯಮಗಳು ಹಾಗೂ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು, ಈ ವಿಷಯದ ಬಗ್ಗೆ ಇರುವ ಹತ್ತಾರು ಬಗೆಯ ಸಂಶಯಗಳನ್ನು ಪರಿಹರಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ವೆಂಕಟೇಶ ನಾಯಕ ಹೇಳಿದರು.

ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗುರುವಾರ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಹಾಗೂ ಜನಗಣತಿ ನಿರ್ದೇಶನಾಲಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ಧ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಾಂಖ್ಯಿಕ ಇಲಾಖೆ ಸರ್ಕಾರ ಪ್ರತಿ ಇಲಾಖೆಯ ಅಂಕಿ ಅಂಶಗಳು ಮುಖ್ಯ. ಈ ಅಂಕಿ ಅಂಶಗಳು ಪ್ರತಿ ಇಲಾಖೆಗೂ ಮಾಹಿತಿಗಾಗಿ ಬೇಕು. ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ನೀಡುವಾಗ ಎಚ್ಚರಿಕೆ ಅವಶ್ಯಕ. ಸಹಜ ಸಾವು ಪ್ರಕರಣ, ಅಸಹಜ ಸಾವು ಪ್ರಕರಣ, ಎಷ್ಟು ಸಾವು ಪ್ರಕರಣ ಎಂಬುದರ ಬಗ್ಗೆ ಮಾಹಿತಿ ದೊರಕಿಸಬೇಕಾಗುತ್ತದೆ. ಈ ಬಗ್ಗೆ ಏನೇನು ನಿಯಮ ಅನುಸರಿಸಬೇಕಾಗುತ್ತದೆ ಎಂಬುದರ ಬಗ್ಗೆ ವೈದ್ಯಕೀಯ ಸಮೂಹ ಮೊದಲೇ ತಿಳಿದಿರಬೇಕು. ಈ ಬಗ್ಗೆ ಹತ್ತಾರು, ಗೊಂದಲ, ಸಂಶಯಗಳಿಗೆ ತಜ್ಞರಿಂದ ಪರಿಹಾರ ಕಂಡುಕೊಳ್ಳುವ ದಿಶೆಯಲ್ಲಿ ಈ ಕಾರ್ಯಾಗಾರ ಆಯೋಜಿಸಿರುವುದು ಸೂಕ್ತವಾಗಿದೆ ಎಂದರು.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಉಪನಿರ್ದೇಶಕ ಕೃಷ್ಣಮೂರ್ತಿ, ಜನಗಣತಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಡಿ ಲಾಜರ್ ಕಾರ್ಯಾಗಾರದ ಮಹತ್ವದ ಬಗ್ಗೆ ವಿವರಿಸಿದರು. ಸಂಪನ್ಮೂಲ ವ್ಯಕ್ತಿ  ರಿಮ್ಸ ಪ್ರಾಧ್ಯಾಪಕ ವಿಜಯಕುಮಾರ ಬಿ ಚೆಟ್ಟಿ ಅವರು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಸಾಂಖ್ಯಿಕ ಇಲಾಖೆ ಅಧಿಕಾರ ಸುನಿಲ್ ಬಿಸ್ವಾಸ್ ಸ್ವಾಗತಿಸಿದರು.

ದಿನಾಂಕ ಬದಲು: ಇಂದೇ ಪೈಕಾ ಕ್ರೀಡಾಕೂಟ
ರಾಯಚೂರು
: ದೇವದುರ್ಗ ತಾಲ್ಲೂಕಿನ ಅರಕೇರಾದಲ್ಲಿ ಆಯೋಜಿಸಲಾಗಿದ್ದ ದೇವದುರ್ಗ ತಾಲೂಕು ಪೈಕಾ ಕ್ರೀಡಾಕೂಟವು ಇದೇ 6ರ ಬದಲು 5 ರಂದು ನಡೆಯಲಿದೆ.

ಈ ಕ್ರೀಡಾ ಕೂಟವನ್ನು ಈ ಹಿಂದೆ 6 ರಂದು ನಡೆಸಲು ತಯಾರಿ ನಡೆಸಲು ದಿನಾಂಕ ಘೊಷಣೆ ಮಾಡಲಾಗಿತ್ತು. ಅಂದು  ಕೆಲ ಸಂಘ ಸಂಸ್ಥೆಗಳು  ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ಬದಲಾವಣೆಯನ್ನು ಮಾಡಲಾಗಿದೆ. ಕ್ರೀಡಾ ಪಟುಗಳು  ಮತ್ತು ಇತರರು ಇದನ್ನು ಗಮನಿಸಿ ಇದೇ 5ರಂದು ಹಾಜರಿರಬೇಕು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೆಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.