ದೇವದುರ್ಗ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಲ್ಲಿ ಪ್ರತಿನಿತ್ಯ ನಡೆಯುವ ಬಿಸಿ ಊಟದ ಉಯೋಜನೆಗೆ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ವಿತರಿಸಲಾಗಿರುವ ಅಡುಗೆ ಅನಿಲ ಕಳೆದ ಒಂದು ತಿಂಗಳಿಂದ ಶಾಲೆಗಳಿಗೆ ಸರಿಯಾಗಿ ವಿತರಣೆ ಮಾಡದೆ ಇರುವುದರಿಂದ ಅಡುಗೆ ಮಾಡಲು ಇನ್ನಿಲ್ಲದ ತೊಂದರೆ ಎದುರಾಗಿದ್ದು, ಕೂಡಲೇ ಕ್ರಮಕೈಗೊಳ್ಳಬೇಕೆಂದು ಅಕ್ಷರ ದಾಸೋಹ ನೌಕರರ ಸಂಘ ತಹಸೀಲ್ದಾರರಿಗೆ ಆಗ್ರಹಿಸಿದೆ.
ಶುಕ್ರವಾರ ಸಿಐಟಿಯು ತಾಲ್ಲೂಕು ಅಧ್ಯಕ್ಷೆ ರಂಗಮ್ಮ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಮರೆಮ್ಮ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಅನೇಕ ದಿನಗಳಿಂದ ಶಾಲೆಗಳಿಗೆ ಅಡುಗೆ ಅನಿಲ ನೀಡಿದೆ ಇರುವುದರಿಂದ ಬಿಸಿ ಊಟ ತಯಾರಿಸುವ ಅಡುಗೆಗಾರರಿಗೆ ಇನ್ನಿಲ್ಲದ ತೊಂದರೆ ಎದುರಾಗಿದೆ. ಅಕ್ಷರ ದಾಸೋಹ ತಾಲ್ಲೂಕು ಅಧಿಕಾರಿಗಳು ಈ ಬಗ್ಗೆ ಕ್ರಮಕ್ಕೆ ಮುಂದಾಗದೆ ಮೌನವಹಿಸಿರುವುದರಿಂದ ಬೆಳಗಾದರೆ ಅಡುಗೆ ಮಾಡಲು ತೊಂದರೆ ಪಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ತಾಲ್ಲೂಕಿನಲ್ಲಿ ಸುಮಾರು 600ಕ್ಕೂ ಹೆಚ್ಚು ಅಡುಗೆ ಅನಿಲ ಹೊಂದಿರುವ ಶಾಲೆಗಳಿಗೆ ಪಟ್ಟಣದ ಅಡುಗೆ ಅನಿಲ ಏಜನ್ಸಿ ಅವರು ಸರಿಯಾಗಿ ವಿತರಣೆ ಮಾಡದೆ ಇರುವುದರಿಂದ ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ ಎಂದು ದೂರಿದರು.
ಜಪ್ತಿ: ಗೃಹ ಉಪಯೋಗಕ್ಕೆಂದು ಪಡೆಯಲಾದ ಅಡುಗೆ ಅನಿಲವನ್ನು ಪಟ್ಟಣ ಸೇರಿದಂತೆ ತಾಲ್ಲೂಕಿನ ಹಳ್ಳಿ,ಹಳ್ಳಿಗಳಲ್ಲಿ ಹೋಟೆಲ್ ಮತ್ತು ವಾಹನಗಳಿಗೆ ಬಳಕೆ ಮಾಡುತ್ತಿರುವುದು ಕಂಡು ಬಂದರೂ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕಾಗಿರುವ ಅಧಿರಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಕೂಡಲೇ ತಹಸೀಲ್ದಾರರು ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಎಲ್ಲ ಹೊಟೇಲ್ಗಳಿಗೆ ಭೇಟಿ ನೀಡಿ ಗೃಹ ಉಪಯೋಗಕ್ಕೆ ಪಡೆಯಲಾದ ಅಡುಗೆ ಅನಿಲವನ್ನು ಪತ್ತೆ ಹಚ್ಚಿ ಜಪ್ತಿ ಮಾಡಬೇಕು ಮತ್ತು ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.