ADVERTISEMENT

ಶಿಥಿಲ ಸೇತುವೆ: ಭಯದಲ್ಲಿ ನಾಗರಿಕರು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 7:20 IST
Last Updated 18 ಆಗಸ್ಟ್ 2012, 7:20 IST

ಹಟ್ಟಿ ಚಿನ್ನದ ಗಣಿ: ಇಲ್ಲಿಯ ಮುಖ್ಯ ರಸ್ತೆಗೆ ನಿರ್ಮಿಸಿದ ಸೇತುವೆ ಶಿಥಿಲಗೊಂಡಿದೆ. ಭಾರಿ ವಾಹನಗಳ ಸಂಚಾರ ಹೆಚ್ಚಾಗಿದ್ದರಿಂದ ಕುಸಿದು ಬೀಳುವ ಭಯದಲ್ಲಿ ಸಾರ್ವಜನಿಕರಿದ್ದಾರೆ.ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಕ್ಕೆ ಹೋಗುವ ಮುಖ್ಯ ರಸ್ತೆಗೆ  ಸುಮಾರು ಐದು ದಶಕಗಳ ಹಿಂದೆ ನಿರ್ಮಿಸಲಾಗಿದೆ.

ಈ ರಸ್ತೆಯ ಮೇಲೆ ಹಟ್ಟಿ ಚಿನ್ನದ ಗಣಿಗೆ ಅದರ ಉಪ ಗಣಿಗಳಾದ ಊಟಿ ಮತ್ತು ಹೀರಾ ಬುದ್ದಿನ್ನಿ ಗಣಿಗಳಿಂದ ದಿನನಿತ್ಯ ಭಾರಿ ಲಾರಿಗಳು ಅದಿರು ಹೊತ್ತು ಓಡಾಡುತ್ತವೆ. ಗಣಿಗೆ ಬೇಕಾಗುವ ಭಾರಿ ಯಂತ್ರಗಳ ಸಾಮಗ್ರಿಗಳು ಹೊತ್ತ ಲಾರಿಗಳು ಈ ಸೇತುವೆ ಮೇಲಿನಿಂದಲೇ ಹಾದು ಹೋಗಬೇಕು. ನೂರಾರು ಸಾರಿಗೆ ಬಸ್‌ಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ.

ಮಳೆಗಾಲದಲ್ಲಿ ಹಳ್ಳದಲ್ಲಿ ನೀರಿನ ರಭಸ ಜಾಸ್ತಿ ಇರುತ್ತದೆ. ನೂತನ ಬಸ್ ನಿಲ್ಧಾಣ ಉದ್ಘಾಟನೆಗೊಂಡಿದ್ದರಿಂದ ಬಸ್‌ಗಳ ಸಂಚಾರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಕುಸಿಯುವ ಆತಂಕ ನಾಗರಿಕರಲ್ಲಿ ಹೆಚ್ಚಾಗಿದೆ. 

ಈ ಸೇತುವೆಗೆ ಬಳಸಿದ ಬಾಂಡ್ ಕಲ್ಲುಗಳು ಹಾಗೂ ಸಿಮೆಂಟ ಗಾರೆ ಭಾರಿ ವಾಹನಗಳ ಸಂಚಾರದಿಂದಾಗುವ ಕಂಪನದಿಂದಾಗಿ ಉದುರುತ್ತಿದೆ. ತುಕ್ಕು ಹಿಡಿದ ಕಬ್ಬಿಣದ ರಾಡ್‌ಗಳು ಹೊರಗೆ ಕಾಣುತ್ತಿವೆ. ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಪ್ರಯೋಜನೆವಾಗಿಲ್ಲ.

ಇಲಾಖೆಯ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ ಸೇತುವೆ ಇನ್ನೂ ಎಷ್ಟು ದಿನಗಳ ಮಟ್ಟಿಗೆ ಸುರಕ್ಷಿತವಾಗಿರುತ್ತದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕೆಂದು ಒತ್ತಾಯಿಸಲಾಗಿತ್ತು. ಆದರೆ ಇಲ್ಲಿವರೆಗೆ ಯಾವ ಕ್ರಮ ಕೈಗೊಳ್ಳದ ಅಧಿಕಾರಿಗಳು ನಿರ್ಲಕ್ಷ್ಯವನ್ನು ತೋರುತ್ತಿದ್ದಾರೆ ಎಂದು ಗ್ರಾಮದ ಮೌನೇಶ ಕಾಕಾನಗರ, ಶ್ರೀನಿವಾಸ ಮಧುಶ್ರೀ ಯಾಕೂಬ್, ಸಂಜೀವಕುಮಾರ ಇತರರು ದೂರುತ್ತಾರೆ.

ಹೊಸದಾಗಿ ಸೇತುವೆ ನಿರ್ಮಿಸಬೇಕೆಂದು ಇವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಶೀಘ್ರ ಕ್ರಮ ಜರುಗಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.