ಸಿಂಧನೂರು: ‘ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿ ಮಾಡಿ. ಪ್ರತಿಯೊಬ್ಬರೂ ಸರ್ಕಾರಿ ನೌಕರಿ ಬೇಕು ಎಂದು ಹೇಳುತ್ತೀರಿ. ಆದರೆ ಏಕೆ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತೀರಿ’ ಎಂದು ಎಸ್ಡಿಎಂಸಿ ಅಧ್ಯಕ್ಷ ಬಿ.ಎನ್.ಯರದಿಹಾಳ ಪ್ರಶ್ನಿಸಿದರು.
ತಾಲ್ಲೂಕಿನ ಹೊಸಳ್ಳಿ ಇಜೆ ಗ್ರಾಮದಲ್ಲಿ ವಲಯ ಮಟ್ಟದ ಶಾಲಾ ದಾಖಲಾತಿ ಆಂದೋಲನ ಪ್ರಯುಕ್ತ ಸೋಮವಾರ ಸೈಕಲ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಆರು ವರ್ಷದ ಮೇಲ್ಪಟ್ಟ ಮಕ್ಕಳು ಹೆಣ್ಣಿರಲಿ ಅಥವಾ ಗಂಡಿರಲಿ ತಪ್ಪದೇ ಸರ್ಕಾರಿ ಶಾಲೆಗೆ ದಾಖಲಿಸಬೇಕು. ಉತ್ತಮ ಶಿಕ್ಷಣ ಪಡೆಯಲು ಮಕ್ಕಳಿಗೆ ಪ್ರೋತ್ಸಾಹಿಸಬೇಕು. ಶಾಲಾಮಕ್ಕಳಿಗೆ ಉಚಿತ ಸಮವಸ್ತ್ರ, ಹಾಲು, ಪುಸ್ತಕ, ಬಿಸಿಯೂಟ, ಶೂಭಾಗ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ’ ಎಂದು ಅವರು ತಿಳಿಸಿದರು.
‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಶಿಕ್ಷಣವಂತರನ್ನಾಗಿ ಮಾಡಬೇಕು. ಅಲ್ಲದೆ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು’ ಎಂದರು.
ಸಿಆರ್ಪಿ ಬಸವರಾಜ ಅಂಗಡಿ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಆದಾಗ್ಯೂ ಖಾಸಗಿ ಶಾಲೆಗಳ ವ್ಯಾಮೋಹ ಪಾಲಕರು ಒಳಗಾಗುತ್ತಿರುವುದು ದುರದೃಷ್ಟಕರ’ ಎಂದರು.
ಗ್ರಾಮ ಪಂಚಾಯಿತಿ ಕಚೇರಿಯಿಂದ ಆರಂಭಗೊಂಡ ಸೈಕಲ್ ಜಾಥಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.
ಮುಖ್ಯಶಿಕ್ಷಕರಾದ ವೀರೇಶ ಸಾಲಿಮಠ, ವೆಂಕಟರೆಡ್ಡಿ ಅಮರಾಪುರ, ಶರಣಪ್ಪಗೌಡ ಸಾಸಲಮರಿ, ಮುರಳೀಧರ್ ಹಟ್ಟಿ, ದಿಲಾವರ್ ಅಂಬರ್ಖಾನ್ ಮತ್ತು ಗ್ರಾಮಪಂಚಾಯಿತಿ ಸದಸ್ಯರು ಇದ್ದರು.
**
ಎಲ್ಲರಿಗೂ ಸರ್ಕಾರಿ ಉದ್ಯೋಗ ಮತ್ತು ಸೌಲಭ್ಯ ಬೇಕು. ಆದರೆ ಸರ್ಕಾರಿ ಶಾಲೆಗಳು ಯಾಕೆ ಬೇಡ? ಯಾಕೆ ಈ ಪರಿ ನಿರ್ಲಕ್ಷ್ಯ, ನಿರಾಸಕ್ತಿ
–ಬಿ.ಎನ್.ಯರದಿಹಾಳ, ಅಧ್ಯಕ್ಷ, ಎಸ್ಡಿಎಂಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.