ADVERTISEMENT

ಸೇತುವೆ ನಿರ್ಮಾಣ ನಿರ್ಲಕ್ಷ್ಯ: ಕಾಮಗಾರಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 7:17 IST
Last Updated 18 ಮಾರ್ಚ್ 2014, 7:17 IST

ಲಿಂಗಸುಗೂರು: ತಾಲ್ಲೂಕಿನ ಕುಪ್ಪಿಗುಡ್ಡ ಗ್ರಾಮದ ಬಳಿ ನಿರ್ಮಿಸುತ್ತಿರುವ ಕಾಲುವೆ­ ದಾಟಿ ಜನತೆ ಗ್ರಾಮದಿಂದ ಜಮೀನುಗಳಿಗೆ ತೆರಳಲು ಸಂಪರ್ಕ ಸೇತುವೆ ನಿರ್ಮಿಸುವಲ್ಲಿ ಕೆಬಿಜೆಎನ್‌­ಎಲ್‌ ಅಧಿಕಾರಿಗಳು ನಿರ್ಲಕ್ಷ್ಯ ತೋರಿ­ದ್ದರಿಂದ ಕುಪ್ಪಿಗುಡ್ಡ ಗ್ರಾಮಸ್ಥರು ಕಾಮ­ಗಾರಿ ಸ್ಥಗಿತಗೊಳಿಸಿದ್ದಾರೆ.

ರಾಂಪೂರ ಏತ ನೀರಾವರಿ ಯೋಜನೆಯಡಿ 2ನೇ ಹಂತದಲ್ಲಿ ನಿರ್ಮಿಸುತ್ತಿರುವ ನಾಲೆಯ 26ನೇ ಕಿ.ಮೀ. ನಲ್ಲಿ ಕುಪ್ಪಿಗುಡ್ಡ ಗ್ರಾಮದಿಂದ ಜಮೀನುಗಳಿಗೆ ಹಾಗೂ ಕಸಬಾಲಿಂಗಸುಗೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗೆ ಅಡ್ಡಲಾಗಿ ಕಾಲುವೆ ನಿರ್ಮಾಣ ಕಾರ್ಯ ಭರದಿಂದ ಆರಂಭಗೊಂಡಿದೆ.

ಆರಂಭದಲ್ಲಿ ಗ್ರಾಮಸ್ಥರಿಗೆ ಗುತ್ತಿಗೆದಾರ ಮತ್ತು ಅಧಿಕಾರಿಗಳು ಸಂಪರ್ಕ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಭಾಗಶಃ ಕಾಮಗಾರಿ ಪೂರ್ಣಗೊಂಡಿದ್ದರು ಕೂಡ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಅನಗತ್ಯ ಕಾರಣ ಹೇಳುತ್ತಿರುವುದರಿಂದ ಆಕ್ರೋಶ­ಗೊಂಡ ಗ್ರಾಮಸ್ಥರು ಕಾಮಗಾರಿ ಪೂರ್ಣಗೊಳಿಸಲು ತಕರಾರು ಮಾಡಿದ್ದಾರೆ.

ರೈತ ಸಾಬಣ್ಣ ನೆಲೊಗಿ ಮಾತನಾಡಿ, ನಕ್ಷೆಯಲ್ಲಿರುವ ರಸ್ತೆ ದಾಟಲು ಸಂಪರ್ಕ ಸೇತುವೆ ನಿರ್ಮಿಸಲು ಅಧಿಕಾರಿಗಳು ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ. ತಲೆ ತಲಾಂತರಗಳಿಂದ ಬಳಸುವ ರಸ್ತೆಗೆ ಸಂಪರ್ಕ ಸೇತುವೆ ನಿರ್ಮಿಸಿಕೊಡದಿದ್ದರೆ ಕಾಮಗಾರಿ ಪೂರ್ಣಗೊಳಿಸಲು ಬಿಡುವು­ದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಕುರಿತು ಕಾರ್ಯನಿರ್ವಾಹಕ ಎಂಜಿನಿಯರ್‌ ಮೃತ್ಯುಂಜಯ ಅವರನ್ನು ಸಂಪರ್ಕಿಸಲಾಗಿ, ಹಳೆ ರಸ್ತೆಗೆ ಸಂಪರ್ಕ ರಸ್ತೆ ನಿರ್ಮಿಸಲು ಪ್ರತ್ಯೇಕ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಟೆಂಡರ್‌ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಚುನಾವಣೆ ಆದ ತಕ್ಷಣ ಪ್ರಕ್ರಿಯೆ ಪೂರ್ಣಗೊಳಿಸಿ ಸೇತುವೆ ನಿರ್ಮಿಸಿಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.