ಮಸ್ಕಿ: ಗ್ರಾಮಾಂತರ ಪ್ರದೇಶದಲ್ಲಿ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಸಹಾಯ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ.ಮುರಾರಿ ತಿಳಿಸಿದರು.ಮಲ್ಲಿಕಾರ್ಜುನ ಶಿಕ್ಷಣ ಹಾಗೂ ಗ್ರಾಮೀಣಾಭೀವೃದ್ಧಿ ಸಂಸ್ಥೆಯ ಜೋಗಿನ್ ರಾಮಣ್ಣ ಸ್ಮಾರಕ ಪ್ರೌಢಶಾಲೆಯಲ್ಲಿ ಶುಕ್ರವಾರ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಕೊಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಪಟ್ಟಣ ಪ್ರದೇಶಗಳಿಗೆ ತುಲನೆ ಮಾಡಿದರೆ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳನ್ನು ನಡೆಸುವದು ಕಷ್ಟಕರವಾಗಿದೆ. ಕಳೆದ 20 ವರ್ಷಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಗಳಿಸಿ ಜಿಲ್ಲೆಯ ಪ್ರತಿಷ್ಟಿತ ಶಾಲೆಯಂದು ಹೆಸರುಗಳಿಸಿದೆ ಎಂದು ಮುರಾರಿ ಹರ್ಷ ವ್ಯಕ್ತಪಡಿಸಿದರು.
ಮಾಳಿಂಗರಾಯ ಪಾಟೀಲ ಮಾತನಾಡಿ ನನಗೆ ಈ ಶಾಲೆಯಲ್ಲಿ ಅಂಕಗಳಿಸುವದನ್ನು ಕಲಿಸಲಿಲ್ಲ. ಬದಲಿಗೆ ಸಮಾಜದಲ್ಲಿ ನಮ್ಮ ಬದುಕು ಹೇಗೆ ಕಟ್ಟಿಕೊಳ್ಳಬೇಕೆಂಬುದನ್ನು ಕಲಿಸಿದ್ದಾರೆ. ಯಾವುದೆ ಸೌಲಭ್ಯವಿಲ್ಲದ ಹಳ್ಳಿಯಲ್ಲಿ ಹುಟ್ಟಿದ ನಾನು ಮೈಸೂರು ವಿಭಾಗಕ್ಕೆ ಸಿಇಟಿಯಲ್ಲಿ ಎರಡನೇ ರ್ಯಾಂಕ್ ಗಳಿಸಿ ಚಿಕ್ಕಮಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆಂದು ನೆನಪಿಸಿಕೊಂಡರು.
ಪಾಲಕ ಪ್ರತಿನಿಧಿ ಪತ್ರಕರ್ತ ಅಬ್ದುಲ್ ಅಜೀಜ್ ಮಾತನಾಡಿ ಈ ಶಾಲೆಯಲ್ಲಿ ಪಠ್ಯದ ವಿಷಯಗಳನ್ನಷ್ಟೆ ಕಲಿಸದೆ ಸಮಾಜದಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಸ್ವಾವಲಂಬಿಯಾಗಿ ಬದುಕುವದನ್ನು ಕಲಿಸುತ್ತಿದ್ದಾರೆಂದರು. ಸಂಸ್ಥೆಯ ಕಾರ್ಯದರ್ಶಿ ಶಿವಕುಮಾರ.ಎನ್. ಗ್ರಾಮ ಪಂಚಾಯತಿ ಅಧ್ಯಕ್ಷೆ ಲಿಲಾವತಿ ಗೋನ್ವಾರ, ತಾಲ್ಲೂಕು ಪಂಚಾಯತಿ ಸದಸ್ಯ ಹನುಮಂತಪ್ಪ ಮೋಚಿ, ಮುಖ್ಯೋಪಾಧ್ಯಯ ಸಿದ್ದಾರಡ್ಡಿ, ಸರೋಜ ದೇಶಪಾಂಡೆ ಉಪಸ್ಥಿತರಿದ್ದರು.ಕೋಶಾಧ್ಯಕ್ಷ ಮಂಜುನಾಥ ಬಿಜ್ಜಳ ಪ್ರಾಸ್ಥಾವಿಕ ಮಾತನಾಡಿದರು. ವಿಜಯಲಕ್ಷ್ಮೀ, ವಿದ್ಯಾವತಿ ನಿರ್ವಹಿಸಿದರು. ಮಂಜುನಾಥ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.